ತರಗತಿಗಳಲ್ಲಿ ಸಿಸಿಟಿವಿ ಅಳವಡಿಕೆ ಬಗ್ಗೆ ಚರ್ಚೆ ಅಗತ್ಯ: ಸುಚಿತ್ರಾ ರಾವ್
ಮಕ್ಕಳ ರಕ್ಷಣಾ ನೀತಿ ಬಗ್ಗೆ ಕಾರ್ಯಾಗಾರ
ಮಂಗಳೂರು, ಜ.16: ತರಗತಿಗಳಲ್ಲಿ ಸಿಸಿಟಿವಿಗಳನ್ನು ಅಳವಡಿಸುವುದರಿಂದ ಮಕ್ಕಳ ಮುಕ್ತ ವಾತಾವರಣಕ್ಕೆ ಅಡ್ಡಿಯಾಗುತ್ತದೆ ಎಂಬ ಆರೋಪಗಳಿವೆ. ಮಕ್ಕಳು ಎಳೆವಯಸ್ಸಿನಲ್ಲಿ ತುಂಟಾಟಗಳನ್ನು ಮಾಡುತ್ತಾರೆ. ಈ ಮಧ್ಯೆ ಸಿಸಿಟಿವಿ ಅಳವಡಿಸುವುದರಿಂದ ಯಾರೋ ನಮ್ಮನ್ನು ಗಮನಿಸುತ್ತಾರೆ ಎಂಬ ಭಾವನೆಯಿಂದ ಮಕ್ಕಳು ವೌನವಾಗಿ ಉಳಿಯುವ ಅಪಾಯವಿದೆ. ಆದ್ದರಿಂದ ಸಿಸಿಟಿವಿ ಆಳವಡಿಕೆಯ ಬಗ್ಗೆ ವ್ಯಾಪಕ ಚರ್ಚೆ ನಡೆಯಬೇಕಾಗಿದೆ ಎಂದು ಯುನಿಸೆಫ್ ಶಿಕ್ಷಣ ಮತ್ತು ಮಕ್ಕಳ ಸಂರಕ್ಷಣೆಯ ಸಲಹಾ ಪ್ರತಿನಿಧಿ ಸುಚಿತ್ರಾ ರಾವ್ ಹೇಳಿದರು.
ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ನೀತಿ ಬಗ್ಗೆ ಜಿಲ್ಲಾ ಸಮಿತಿಯ ಸದಸ್ಯರು ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೋಮವಾರ ನಡೆದ ಜಿಲ್ಲಾಮಟ್ಟದ ಕಾರ್ಯಾಗಾರವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಮಕ್ಕಳ ರಕ್ಷಣಾ ನೀತಿಯನ್ನು ಸಮಗ್ರವಾಗಿ ರೂಪಿಸಿರುವ ಹೆಗ್ಗಳಿಕೆ ಕರ್ನಾಟಕಕ್ಕೆ ಸಲ್ಲುತ್ತದೆ. ಇತರ ರಾಜ್ಯಗಳೂ ಕರ್ನಾಟಕದಿಂದ ಸಲಹೆಗಳನ್ನು ಕೇಳುತ್ತಿವೆ. ಈ ನೀತಿಯ ಯಶಸ್ವಿ ಜಾರಿಗೆ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಾರಣವಾಗಿದೆ. ಶಿಕ್ಷಣ ಸಂಸ್ಥೆಗಳು, ಆಶ್ರಮ ಶಾಲೆಗಳು, ಮದ್ರಸಗಳು , ವಸತಿಯುತ ಕೋಚಿಂಗ್ ಸೆಂಟರ್ಗಳು ಕೂಡ ಈ ಮಕ್ಕಳ ರಕ್ಷಣಾ ನೀತಿಯ ವ್ಯಾಪ್ತಿಗೆ ಬರುತ್ತವೆ ಎಂದು ಸುಚಿತ್ರಾ ರಾವ್ ಅವರು ಹೇಳಿದರು.
ಯುನಿಸೆಫ್ ಮಕ್ಕಳ ಸಂರಕ್ಷಣಾ ಘಟಕದ ಪ್ರಾದೇಶಿಕ ಸಂಯೋಜಕ ಕೆ. ರಾಘವೇಂದ್ರ ಭಟ್ ಮಾತನಾಡಿ ಮಕ್ಕಳ ಅಭಿವೃದ್ಧಿಗೆ ಸಂಬಂಧಿಸಿ 68 ಸೂಚ್ಯಂಕಗಳನ್ನು ಗುರುತಿಸಲಾಗಿದೆ. ದ.ಕ. ಸೇರಿದಂತೆ ಈ ಅಭಿವೃದ್ಧಿ ಸೂಚ್ಯಂಕ 68 ಎಲ್ಲೂ ದಾಟಿಲ್ಲ. ಮಾನವ ಅಭಿವೃಧ್ಧಿ ಸೂಚ್ಯಂಕದಲ್ಲಿ ಕರ್ನಾಟಕ ಹೆಚ್ಚೇನೂ ಪ್ರಗತಿ ಸಾಧಿಸಿಲ್ಲ. ಆರ್ಥಿಕ ನೆರವು ನೀಡಿದ ತಕ್ಷಣ ಮಾನವ ಅಭಿವೃದ್ಧಿ ಸಾಧ್ಯವಿಲ್ಲ ಎಂದರು.
ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ನಿಖೇಶ್ ಶೆಟ್ಟಿ, ಮಕ್ಕಳ ರಕ್ಷಣಾಧಿಕಾರಿ ಉಸ್ಮಾನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಸುಂದರ ಪೂಜಾರಿ ಮತ್ತಿತರರು ಇದ್ದರು.