ಎಸ್ಸೆಸ್ಸೆಫ್ ಹಾಗೂ ಎಸ್ ವೈಸ್ ಉಕ್ಕುಡ ಶಾಖೆ ವತಿಯಿಂದ ತಾಜುಲ್ ಉಲಮಾ ರವರ ಅನುಸ್ಮರಣಾ ಸಂಗಮ
ವಿಟ್ಲ; ಎಸ್ಸೆಸ್ಸೆಫ್ ಉಕ್ಕುಡ ಹಾಗೂ ಎಸ್ ವೈಸ್ ಉಕ್ಕುಡ ಶಾಖೆಯ ವತಿಯಿಂದ ಅಸ್ಸಯ್ಯದ್ ತಾಜುಲ್ ಉಲಮಾ ತಂಙಳ್ ರವರ ಅನುಸ್ಮರಣಾ ಸಂಗಮವು ಉಕ್ಕುಡ ತಾಜುಲ್ ಉಲಮಾ ನಗರದ ಜಮಲುಲ್ಲೈಲಿ ತಂಙಳ್ ವೇದಿಕೆಯಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶೈಖುನಾ ಮಹ್ಮೂದುಲ್ ಫೈಝಿ ವಾಲೆಮುಂಡೋವು ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಎಸ್ಸೆಸ್ಸೆಫ್ ವಿಟ್ಲ ಡಿವಿಶನ್ ಎಂಕೆಎಂ ಕಾಮಿಲ್ ಸಖಾಫಿ ಕೊಡಂಗಾಯಿ ನಿರ್ವಹಿಸಿದರು, ಅಸಯ್ಯದ್ ಕೆ ಸ್ ಮುಖ್ತಾರ್ ತಂಙಳ್ ಕುಂಬೋಲ್ ದುಆ ಆಶೀರ್ವಚನಗೈದರು. ಮುಹಮ್ಮದಲಿ ಸಖಾಫಿ ಸುರಿಬೈಲು ಪ್ರಾಸ್ತಾವಿಕ ಭಾಷಣಗೈದರು. ಕೇರಳದ ಪ್ರೌಡೊಜ್ವಲ ವಾಗ್ಮಿ ಅಬ್ದುರ್ರಹ್ಮಾನ್ ಸಅದಿ ಓಣಕ್ಕಾಡ್ ತಮ್ಮ ಅಭೂತಪೂರ್ವ ಪ್ರಭಾಷಣ ಶೈಲಿಯಲ್ಲಿ ತಾಜುಲ್ ಉಲಮಾ ತಂಙಳ್ ರವರ ಮಾದರೀಯೋಗ್ಯ ಜೀವನ ಶೈಲಿಯನ್ನು ಜನರಿಗೆ ಮನತಟ್ಟುವಂತೆ ತಿಳಿಸಿಕೊಟ್ಟರು.
ಕರ್ನಾಟಕ ರಾಜ್ಯ ಆರೋಗ್ಯ ಸಚಿವ ಜನಾಬ್ ಯು ಟಿ ಖಾದರ್ ಮಾತಾನಾಡಿ ಮನುಷ್ಯನು ಜೀವನದಲ್ಲಿ ತಾಳ್ಮೆಯುಳ್ಳವನಾಗಬೇಕು, ತಾಳ್ಮೆಯು ಜೀವನದ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಾಗಿದೆ, ತಾಳ್ಮೆ ಇಲ್ಲ ಎಂದಿದ್ದರೆ ನಾನು ಈಗ ಆರೋಗ್ಯ ಮಂತ್ರಿಯಾಗಿರಲು ಸಾಧ್ಯವಾಗುತ್ತಿರಲಿಲ್ಲ, ಎಲ್ಲವೂ ತಾಳ್ಮೆಯ ಫಲ ಎಂದು ವಿವರಿಸಿದರು,ತಾಜುಲ್ ಉಲಮಾ ತಂಙಳ್ ರ ಆಶೀರ್ವಾದದಿಂದ ಹಾಗೂ ಎಲ್ಲಾ ಉಲಮಾಗಳ ದುಆದಿಂದಾಗಿ ಯಾವುದೇ ಪ್ರಯಾಸವಿಲ್ಲದೆ, ಸಚಿವನಾದೆನು ಎಂದರು.
ವೇದಿಕೆಯಲ್ಲಿ ಮುಹಿಮ್ಮಾತ್ ಮುದರ್ರಿಸ್ ಇಬ್ರಾಹಿಮ್ ಸಖಾಫಿ ಕರ್ನೂರ್, ಎಸ್ ವೈಎಸ್ ವಿಟ್ಲ ಸೆಂಟರ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಮ್ ಮುಸ್ಲಿಯಾರ್ ಕೊಡಂಗಾಯಿ,ಎಸ್ಸೆಸ್ಸೆಫ್ ವಿಟ್ಲ ಸೌತ್ ಸೆಕ್ಟರ್ ಅಧ್ಯಕ್ಷ ಅಬ್ದುರ್ರಹ್ಮಾನ್ ಶರಫಿ ಮೂಡಂಬೈಲು, ಎಸ್ ವೈಎಸ್ ಉಕ್ಕುಡ ಬ್ರಾಂಚ್ ಕಾರ್ಯದರ್ಶಿ ಮುಹಮ್ಮದ್ ಶರೀಫ್ ಉಕ್ಕುಡ, ಕೋಶಾಧಿಕಾರಿ ಅಬ್ದುಲ್ ಅಝೀಝ್ ಟಿಎಚ್ ಎಂಎ,ದ.ಕ ಜಿಲ್ಲಾ ಪಂಚಾಯತ್ ಸದಸ್ಯ ಎಂಎಸ್ ಮುಹಮ್ಮದ್, ಎಸ್ಸೆಮ್ಮೆ ವಿಟ್ಲ ರೀಜ್ಯನಲ್ ಅಧ್ಯಕ್ಷ ಹಮೀದ್ ಕೊಡಂಗಾಯಿ, ಅಬ್ದುಲ್ ರಝಾಕ್ ನಈಮಿ ಕಾನತ್ತಡ್ಕ, ಅಬ್ದಲ್ಲಾ ಸಖಾಫಿ ಕಾನತ್ತಡ್ಕ, ಇಬ್ರಾಹಿಮ್ ಮುಸ್ಲಿಯಾರ್ ಅಳಿಕೆ , ಅಬ್ದುಲ್ ರಹ್ಮಾನ್ ಲತೀಫಿ ಉಕ್ಕುಡ, ಮುಂತಾದ ಉಲಮಾ ಉಮರಾಗಳು ಉಪಸ್ಥಿತರಿದ್ದರು. ಉಕ್ಕುಡ ಎಸ್ಸೆಸ್ಸೆಫ್ ಉಪಾಧ್ಯಕ್ಷ ಮುಹಮ್ಮದ್ ಬಶೀರ್ ಸಖಾಫಿ ಉಕ್ಕುಡ ಸ್ವಾಗತಿಸಿದರು, ಇಸ್ಮಾಯಿಲ್ ಮಾಸ್ಟರ್ ಮಂಗಿಳಪದವು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಪ್ರಯುಕ್ತ ಬಡ ಹೆಣ್ಣಿಗೆ ಮದುವೆ ಸಹಾಯ ನೀಡುವುದಾಗಿ ತೀರ್ಮಾನಿಸಲಾಯಿತು.