ಪಿಲಾರು: ಶ್ರೀ ನಾಗಬ್ರಹ್ಮ ಕ್ಷೇತ್ರದ 8ನೆ ವಾರ್ಷಿಕ ಪ್ರತಿಷ್ಠಾ ಮಹೋತ್ಸವ
ಉಳ್ಳಾಲ, ಮೇ 8: ಉತ್ತಮ ಸಮಾಜ ನಿರ್ಮಿಸಲು ಮಕ್ಕಳಲ್ಲಿ ಸರಿಯಾದ ಜ್ಞಾನವನ್ನು ತುಂಬಬೇಕಿದೆ. ಹೆತ್ತವರು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕಾದ ಅನಿವಾರ್ಯತೆ ಇದೆ ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ಪ್ರಧಾನ ಅರ್ಚಕ ಬ್ರಹ್ಮಶ್ರೀ ಬಿ. ಕೇಶವ ಜೋಗಿತ್ತಾಯ ಅಭಿಪ್ರಾಯಪಟ್ಟರು.
ಪಿಲಾರು ಲಕ್ಷ್ಮೀಗುಡ್ಡೆ ಯೆನೆಪೊಯ ಪ್ರಾಂಗಣದಲ್ಲಿರುವ ಶ್ರೀ ನಾಗಬ್ರಹ್ಮ ಕ್ಷೇತ್ರದ ಎಂಟನೇ ವಾರ್ಷಿಕ ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ನಡೆದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯೆನೆಪೊಯ ವಿಶ್ವವಿದ್ಯಾನಿಲಯದ ಕುಲಪತಿ ವೈ.ಅಬ್ದುಲ್ಲಾ ಕುಂಞಿ ಮಾತನಾಡಿ, ಹೆತ್ತವರು ಮಕ್ಕಳಿಗೆ ಎಲ್ಲರೂ ಸಹೋದರರಂತೆ ಬಾಳುವಂತಹ ಮನಸ್ಥಿತಿಯನ್ನು ಬೆಳೆಸಿದಲ್ಲಿ ಅತಿ ಶೀಘ್ರವೇ ಅಖಂಡ ಭಾರತದ ನಿರ್ಮಾಣ ಸಾಧ್ಯ ಎಂದರು.
ಯೆನೆಪೊಯ ಗ್ರೂಪಿನ ನಿರ್ದೇಶಕ ಎ.ರಾಮಚಂದ್ರ ಶೆಟ್ಟಿ, ಕ್ಷೇತ್ರದ ಕಾರ್ಯಾಧ್ಯಕ್ಷ ಸಂಜೀವ ಪಿಲಾರ್ ಮುಖ್ಯ ಅತಿಥಿಗಳಾಗಿದ್ದರು. ಪದಾಧಿಕಾರಿಗಳಾದ ಪುರಂದರದಾಸ್, ಲೋಕೇಶ್ ಶೆಟ್ಟಿ, ಪರಮೇಶ್ವರ ಕುಲಾಲ್, ಸಂದೇಶ್ ಶೆಟ್ಟಿ, ಸಂಪತ್ ಕುಮಾರ್, ಬಾಬು ಬೆಳ್ಚಾಡ, ಮನೋಜ್ ಕುಮಾರ್ , ಮಹಿಳಾ ಸೇವಾ ಸಮಿತಿ ಅಧ್ಯಕ್ಷೆ ಪುಷ್ಪಾ, ಕಾರ್ಯದರ್ಶಿ ಸುರೇಖಾ ಮೊದಲಾದವರು ಉಪಸ್ಥಿತರಿದ್ದರು.
ಸುರೇಶ್ ಆಚಾರ್ ದೇರಳಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ಚಂದ್ರಹಾಸ್ ದಾಸ್ ಪಿಲಾರ್ ವಂದಿಸಿದರು.
ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಪ್ರಧಾನ ಅರ್ಚಕ ಬ್ರಹ್ಮಶ್ರೀ ಬಿ. ಕೇಶವ ಜೋಗಿತ್ತಾಯ ಇವರ ನೇತೃತ್ವದಲ್ಲಿ ವೈದಿಕ ಕಾರ್ಯಕ್ರಮಗಳು ಜರಗಿತು.
ಸಭಾ ಕಾರ್ಯಕ್ರಮದ ಮುಕ್ತಾಯ ನಂತರ ಮುಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಕೃಪಾ ಪೋಷಿತ ಯಕ್ಷಗಾನ ಮಂಡಳಿ ವತಿಯಿಂದ ರವಿ ಸುರತ್ಕಲ್ ರಚಿಸಿದ ‘ ಬನತ ಬಂಗಾರ್’ ತುಳು ಯಕ್ಷಗಾನ ಬಯಲಾಟ ನಡೆಯಿತು.