ಮಲೇರಿಯಾ ಮುಕ್ತ ಉಡುಪಿಗಾಗಿ ಕೈ ಜೋಡಿಸಿ: ಪ್ರಮೋದ್
ಮಲೇರಿಯಾ ವಿರೋಧಿ ಮಾಸಾಚರಣೆಗೆ ಚಾಲನೆ
ಉಡುಪಿ, ಜೂ.30: ಉಡುಪಿಯನ್ನು ಮಲೇರಿಯಾ ಮುಕ್ತ ಜಿಲ್ಲೆಯನ್ನಾಗಿ ಘೋಷಿಸಲು ಆರೋಗ್ಯ ಇಲಾಖೆ ಮತ್ತು ನಗರಸಭೆಯೊಂದಿಗೆ ಸಾರ್ವಜನಿಕರು ಹಾಗೂ ಎಲ್ಲಾ ಸಂಘ ಸಂಸ್ಥೆಗಳು ಕೈಜೋಡಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಕರೆ ನೀಡಿದ್ದಾರೆ.
ಶುಕ್ರವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಚೇರಿ ಉಡುಪಿ, ಏಳೂರು ಮೊಗವೀರ ಮಹಾಜನ ಸಂಘ ಮಲ್ಪೆ, ರೋಟರಿ ಕ್ಲಬ್ ಮಲ್ಪೆ ಕೊಡವೂರು ಇವರ ಸಂಯುಕ್ತ ಆಶ್ರಯದಲ್ಲಿ ಮಲ್ಪೆ ಏಳೂರು ಮೊಗವೀರ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಮಲೇರಿಯಾ ವಿರೋಧಿ ಮಾಸಾಚರಣೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳಿಗೆ ಉಚಿತ ಸೊಳ್ಳೆ ಪರದೆಗಳನ್ನು ವಿತರಿಸಿ ಮಾತನಾಡುತಿದ್ದರು.
ಉಡುಪಿ ಜಿಲ್ಲೆಯಲ್ಲಿ 2015ರಲ್ಲಿ 1366 ಮಲೇರಿಯ ಪ್ರಕರಣ ವರದಿಯಾಗಿದ್ದರೆ, 2016ರಲ್ಲಿ ಈ ಸಂಖ್ಯೆ 1168ಕ್ಕೆ ಇಳಿದಿತ್ತು. ಈ ವರ್ಷ ಇದುವರೆಗೆ 111 ಪ್ರಕರಣಗಳು ವರದಿಯಾಗಿದ್ದು, ವರ್ಷದಿಂದ ವರ್ಷಕ್ಕೆ ಜಿಲ್ಲೆಯಲ್ಲಿ ಮಲೇರಿಯಾ ರೋಗ ನಿಯಂತ್ರಣಕ್ಕೆ ಬರುತ್ತಿದೆ. ಇದು ಕೇವಲ ಸರಕಾರ ಹಾಗೂ ಆರೋಗ್ಯ ಇಲಾಖೆಯ ಜವಾಬ್ದಾರಿ ಮಾತ್ರವಲ್ಲ. ಇದರಲ್ಲಿ ಸಮಾಜ ಹಾಗೂ ಕುಟುಂಬದ ಜವಾಬ್ದಾರಿಯೂ ಇದೆ ಎಂದವರು ನುಡಿದರು.
ಜಿಲ್ಲೆಯಲ್ಲಿ ಮಲೇರಿಯಾ ತಡೆಗಾಗಿ ಆರೋಗ್ಯ ಇಲಾಖೆ ಮೂಲಕ 18,000 ಕುಟುಂಬಗಳಿಗೆ ಉಚಿತವಾಗಿ ಸೊಳ್ಳೆ ಪರದೆಗಳನ್ನು ವಿತರಿಸಲಾಗುತ್ತಿದೆ. ಉಡುಪಿ ನಗರಸಭೆಯೂ ಪ್ರತಿ ವರ್ಷ ಮೇಲೇರಿಯಾ ನಿಯಂತ್ರಣಕ್ಕೆ 7 ಲಕ್ಷ ರೂ.ಗಳನ್ನು ವೆಚ್ಚ ಮಾಡುತ್ತಿದೆ. ಜಿಲ್ಲೆಯಲ್ಲಿರುವ ಎಲ್ಲಾ ಹಾಸ್ಟೆಲ್ಗಳ ವಿದ್ಯಾರ್ಥಿಗಳಿಗೂ ಉಚಿತವಾಗಿ ಸೊಳ್ಳೆ ಪರದೆ ವಿತರಿಸಲಾಗುತ್ತಿದೆ ಎಂದವರು ವಿವರಿಸಿದರು.
ಸಾರ್ವಜನಿಕರು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಗೊಂಡು ನೀರು ನಿಲ್ಲದಂತೆ ಹಾಗೂ ಮನೆ ಸುತ್ತಮುತ್ತ ಸೊಳ್ಳೆಗಳ ಬೆಳವಣಿಗೆಯಾಗದಂತೆ ಮುಂಜಾಗ್ರತೆ ವಹಿಸುವುದರಿಂದ ಮಲೇರಿಯಾ ರೋಗದಿಂದ ಮುಕ್ತ ವಾಗಬಹುದು. ಉಡುಪಿಯನ್ನು ಮಲೇರಿಯಾ ಮುಕ್ತ ಜಿಲ್ಲೆಯನ್ನಾಗಿಸಲು ಪ್ರತಿ ವ್ಯಕ್ತಿ, ಪ್ರತಿ ಕುಟುಂಬ ಹಾಗೂ ಇಡೀ ಸಮಾಜ ಕೈಜೋಡಿಸಬೇಕು. ಸಮಾಜದ ಆರೋಗ್ಯ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿ ಸಹ ಎಂದು ಸಚಿವರು ತಿಳಿಸಿದರು.
ಸಾರ್ವಜನಿಕರು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಗೊಂಡು ನೀರು ನಿಲ್ಲದಂತೆ ಹಾಗೂ ಮನೆ ಸುತ್ತಮುತ್ತ ಸೊಳ್ಳೆಗಳ ಬೆಳವಣಿಗೆಯಾಗದಂತೆ ಮುಂಜಾಗ್ರತೆ ವಹಿಸುವುದರಿಂದ ಮಲೇರಿಯಾ ರೋಗದಿಂದ ಮುಕ್ತ ವಾಗಬಹುದು. ಉಡುಪಿಯನ್ನು ಮಲೇರಿಯಾ ಮುಕ್ತ ಜಿಲ್ಲೆಯನ್ನಾಗಿಸಲು ಪ್ರತಿ ವ್ಯಕ್ತಿ, ಪ್ರತಿ ಕುಟುಂಬ ಹಾಗೂ ಇಡೀ ಸಮಾಜ ಕೈಜೋಡಿಸಬೇಕು. ಸಮಾಜದ ಆರೋಗ್ಯ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿ ಸಹ ಎಂದು ಸಚಿವರು ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಮಾತನಾಡಿ, ಸಾರ್ವಜನಿಕರು ಕಸವನ್ನು ಎಲ್ಲೆಂದರಲ್ಲಿ ಬಿಸಾಡುವು ದರಿಂದ ತ್ಯಾಜ್ಯ ಸೃಷ್ಠಿಯಾಗಿ ರೋಗಗಳು ಬರುತ್ತವೆ. ನಗರಸಭೆ ವತಿಯಿಂದ ಕೈಗೊಳ್ಳಲಾಗಿರುವ ಕಸ ವಿಲೇವಾರಿ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರು ಸಹಕರಿಸುವಂತೆ, ಮನೆ-ವಠಾರದ ಸ್ವಚ್ಚತೆ ಕಾಪಾಡುವಂತೆ ಸಲಹೆ ನೀಡಿದರು.
ಅಪರ ಜಿಲ್ಲಾಧಿಕಾರಿ ಅನುರಾಧ, ಉಡುಪಿ ಜಿಪಂ ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ಪ್ರೇಮಾನಂದ್,ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಗಣಪತಿ ಭಟ್, ಏಳೂರು ಮೊಗವೀರ ಮಹಾಜನ ಸಂಘದ ಉಪಾಧ್ಯಕ್ಷ ಗುಂಡು ಬಿ.ಅಮೀನ್, ರೋಟರಿ ಕ್ಲಬ್ನ ಮಹೇಶ್ ಕುಮಾರ್ ಉಪಸ್ಥಿತರಿದ್ದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರೋಹಿಣಿ ಸ್ವಾಗತಿಸಿದರು. ಆರೋಗ್ಯ ಮೇಲ್ವಿಚಾರಕ ಕೃಷ್ಣಪ್ಪ ವಂದಿಸಿದರು. ಆರೋಗ್ಯ ಇಲಾಖೆಯ ಆನಂದ ಗೌಡ ಕಾರ್ಯಕ್ರಮ ನಿರೂಪಿಸಿದರು.