ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘಕ್ಕೆ 43,96,923 ರೂ. ಲಾಭಾಂಶ
ಪುತ್ತೂರು, ಜು.3: ತಾಲೂಕಿನ ನಾಲ್ಕು ಕಡೆಗಳಲ್ಲಿ ಶಾಖೆಗಳನ್ನು ಹೊಂದಿದ್ದು, ಪುತ್ತೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘ ಪ್ರಸಕ್ತ ಸಾಲಿನಲ್ಲಿ 43,96,923 ರೂ. ಲಾಭಾಂಶ ಗಳಿಸಿದೆ. ಈ ಹಿನ್ನೆಲೆಯಲ್ಲಿ ಶೇ.15.5 ಡಿವಿಡೆಂಡ್ ನೀಡುವುದಾಗಿ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ ಘೋಷಣೆ ಮಾಡಿದ್ದಾರೆ.
ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ರವಿವಾರ ನಡೆದ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಮಹಾಸಭೆಯ ಅಧ್ಯಕ್ಷತೆ ಅವರು ಮಾತನಾಡುತ್ತಿದ್ದರು.
ಪ್ರಧಾನ ಕಚೇರಿ ಮತ್ತು ಶಾಖೆಗಳನ್ನು ಸೇರಿಸಿ ಒಟ್ಟು 4,078 ಸದಸ್ಯರನ್ನು ಒಳಗೊಂಡ ಸಂಘವು ರೂ. 1,53,56,875 ಪಾಲು ಬಂಡವಾಳ, ರೂ. 16,32,44,273 ಠೇವಣಿಗಳು ಹಾಗೂ ರೂ. 16,93,86,851 ಸಾಲಗಳನ್ನು ವಿತರಣೆ ಮಾಡಿದೆ. ಕಾನೂನಿನ ಚೌಕಟ್ಟಿನಂತೆ ನಿಧಿಗಳಿಗೂ ಹಣ ವಿನಿಯೋಗಿಸಲಾಗಿದೆ ಎಂದು ವಿವರಿಸಿದರು. ಒಕ್ಕಲಿಗ ಗೌಡ ಸೇವಾ ಸಂಘದ ಉಪಾಧ್ಯಕ್ಷ ಸಂಜೀವ ಮಠಂದೂರು ಮಾತನಾಡಿದರು.
ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ನಾಗಪ್ಪಗೌಡ ಬೊಮ್ಮೆಟ್ಟಿ ಮಾತನಾಡಿ, ಸಂಘದ ಪ್ರಧಾನ ಕಚೇರಿಗೆ ಸೂಕ್ತ ಕೊಠಡಿ ಒದಗಿಸುವ ಉದ್ದೇಶದಿಂದ ಒಕ್ಕಲಿಗ ಗೌಡ ಸಮುದಾಯ ಭವನದ ಎದುರಿನಲ್ಲಿ ಕಟ್ಟಡ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿತ್ತು. ಇದು ಕಾರ್ಯಗತಗೊಂಡಲ್ಲಿ ಪತ್ತಿನ ಸಹಕಾರ ಸಂಘಕ್ಕೂ 2 ಕೊಠಡಿಗಳನ್ನು ನೀಡುವ ಉದ್ದೇಶ ಇಟ್ಟುಕೊಳ್ಳಲಾಗಿದೆ ಎಂದು ಹೇಳಿದರು.
ನಿರ್ದೇಶಕರಾದ ಚಂದ್ರಶೇಖರ್, ಸುಬ್ಬಯ್ಯ ಗೌಡ ಕುದ್ಕುಳಿ, ಲಿಂಗಪ್ಪಗೌಡ ತೆಂಕಿಲ, ವಿಜಯ ಕೇಶವ ಗೌಡ, ಮಂಜುನಾಥ್ ಎನ್.ಎಸ್., ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ನಾಗಪ್ಪ ಗೌಡ ಬೊಮ್ಮೆಟ್ಟಿ, ಒಕ್ಕಲಿಗ ಸ್ವಸಹಾಯ ಸಂಘದ ಅಧ್ಯಕ್ಷ ಎ.ವಿ.ನಾರಾಯಣರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಹಿರೇಬಂಡಾಡಿಯ ವೆಂಕಪ್ಪ ಗೌಡರ ಅನಾರೋಗ್ಯದ ಚಿಕಿತ್ಸೆಗಾಗಿ ಮತ್ತು ಹೊನ್ನಪ್ಪ ಗೌಡ ಪಟ್ಟೆಯವರ ಪುತ್ರಿ ಗ್ರೀಶ್ಮಾ ಹಾಗೂ ಜಗನ್ನಾಥ ಎಂಬವರ ಶಿಕ್ಷಣಕ್ಕಾಗಿ ಸಂಘದ ವತಿಯಿಂದ ಆರ್ಥಿಕ ನೆರವು ನೀಡಲಾಯಿತು. ಒಕ್ಕಲಿಗ ಪತ್ತಿನ ಸಹಕಾರ ಸಂಘದ ನಿರ್ದೇಶಕ ಮೋಹನ್ ಗೌಡ ಇಡ್ಯಡ್ಕ ಸ್ವಾಗತಿಸಿ, ವಂದಿಸಿದರು.