ಕಲ್ಲಡ್ಕ ಪ್ರಕರಣ: ಸೂತ್ರಧಾರಿಗಳ ವಿರುದ್ಧ ಕ್ರಮಕ್ಕೆ ಹಿಂದೇಟು ಯಾಕೆ?
ಜಿಲ್ಲಾ ಮಟ್ಟದ ಶಾಂತಿ ಸಭೆ ಸಹಿತ ಸಾರ್ವತ್ರಿಕವಾಗಿ ಕೇಳಿ ಬರುವ ಪ್ರಶ್ನೆ
ಮಂಗಳೂರು, ಜು.15: ದ.ಕ.ಜಿಲ್ಲೆಯಲ್ಲಿ ಕಳೆದ ಮೂರು ತಿಂಗಳಿನಿಂದ ಕೊಲೆ, ಕೊಲೆಯತ್ನ, ಹಲ್ಲೆ, ಅಂಗಡಿ ಮುಂಗಟ್ಟುಗಳಿಗೆ ಕಲ್ಲೆಸೆತ ಹೀಗೆ ಅಪರಾಧ ಪ್ರಕರಣಗಳು ಘಟಿಸುತ್ತಲೇ ಇದೆ. ಸದ್ಯ ಮೇಲ್ನೋಟಕ್ಕೆ ಪರಿಸ್ಥಿತಿ ಶಾಂತಗೊಂಡಂತೆ ಕಂಡು ಬಂದರೂ ‘ಗೆರಿಲ್ಲಾ’ ಮಾದರಿಯಲ್ಲಿ ಅಲ್ಲಲ್ಲಿ ಶಾಂತಿ ಕದಡುವ ಪ್ರಯತ್ನ ನಡೆಯುತ್ತಿವೆ. ಅದಕ್ಕೆ ಪುಷ್ಠಿ ಎಂಬಂತೆ ಮಂಗಳೂರು ನಗರ ಪೊಲೀಸ್ ಆಯುಕ್ತಾಲಯ ವ್ಯಾಪ್ತಿ ಹೊರತುಪಡಿಸಿ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಸೆ.144 ಜಾರಿಗೊಳಿಸಿರುವುದು ಸಾಕ್ಷಿ.
ಎ.20ರಂದು ಕರೋಪಾಡಿ ಗ್ರಾಪಂ ಅಧ್ಯಕ್ಷ ಜಲೀಲ್ ಕರೋಪಾಡಿ ಹತ್ಯೆ
ಯೊಂದಿಗೆ ಜಿಲ್ಲೆಯಲ್ಲಿ ಶಾಂತಿ ಕದಡುವ ಯತ್ನಕ್ಕೆ ಮುನ್ನುಡಿ ಬರೆಯಲಾಯಿತು. ಆ ಬಳಿಕ ಅಶ್ರಫ್ ಕಲಾಯಿ ಹಾಗು ಶರತ್ ಮಡಿವಾಳರ ಹತ್ಯೆ ಕೂಡ ಜಿಲ್ಲೆಯನ್ನು ತಲ್ಲಣಗೊಳಿಸಿತ್ತು. ಈ ಮಧ್ಯೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಎಸ್ಡಿಪಿಐ, ಸಿಪಿಎಂ, ಸಿಪಿಐ ಘಟನೆಯ ಬಗ್ಗೆ ಹೇಳಿಕೆ ನೀಡತೊಡಗಿತು. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಯ ಆರೋಪ-ಪ್ರತ್ಯಾರೋಪ ಸದ್ಯ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಸಂಸದರಾದ ನಳಿನ್ ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ‘ಜನಪ್ರತಿನಿಧಿ’ಗಳು ಎಂಬುದನ್ನು ಮರೆತು ‘ಹಿಂದುತ್ವ’ವಾದಿಗಳಂತೆ ವರ್ತಿಸತೊಡಗಿದರು.
ಎಸ್ಡಿಪಿಐ ಪಕ್ಷದ ನಾಯಕರು ಕಾಂಗ್ರೆಸ್ ಮತ್ತು ಬಿಜೆಪಿಯ ವಿರುದ್ಧ ಹರಿಹಾಯ್ದರೆ, ಬಿಜೆಪಿ ಮತ್ತು ಎಸ್ಡಿಪಿಐ ಚುನಾವಣಾ ಪೂರ್ವ ದೋಸ್ತಿ ಮಾಡಿಕೊಂಡಿದೆ ಎಂದು ಕಾಂಗ್ರೆಸ್ ದೂರತೊಡಗಿತು. ಜಿಲ್ಲೆಯಲ್ಲಿ ಶಾಂತಿಗಾಗಿ ಜೆಡಿಎಸ್ ಸರ್ವ ಪಕ್ಷಗಳ, ಸರ್ವ ಧರ್ಮಗುರುಗಳ ಪಾದಯಾತ್ರೆಗೆ ಸಿದ್ಧತೆ ನಡೆಸಿದ್ದರೂ ಅದಕ್ಕೆ ಸಚಿವರು ಅಡ್ಡಿಯಾಗಿದ್ದಾರೆ ಎಂದು ಆರೋಪಿಸಿತ್ತು. ಸಚಿವರು, ಶಾಸಕರು, ಅಧಿಕಾರಿಗಳು, ವಿವಿಧ ಪಕ್ಷಗಳ ಮುಖಂಡರು, ಸಂಘಟನೆಗಳ ನಾಯಕರು ಸ್ಥಳಕ್ಕೆ ಭೇಟಿ, ಸುದ್ದಿಗೋಷ್ಠಿ ನಡೆಸಿ ಗಮನ ಸೆಳೆದಿದ್ದಾರೆ.
ಸಚಿವರು ಗುರಿ: ಜಿಲ್ಲೆಯಲ್ಲಿ ನಡೆಯುವ ಈ ಎಲ್ಲ ಅಹಿತಕರ ಘಟನೆಗಳಿಗೆ ಸಂಬಂಧಿಸಿದಂತೆ ಬಹುತೇಕ ಎಲ್ಲ ಪಕ್ಷಗಳು, ಸಂಘಟನೆಗಳು ಸಚಿವರಾದ ರಮಾನಾಥ ರೈ ಮತ್ತು ಯು.ಟಿ. ಖಾದರ್ ವಿರುದ್ಧ ಹರಿಹಾಯ್ದಿದೆ. ಸಚಿವರು ಅಲ್ಪಸಂಖ್ಯಾತರ ಓಲೈಕೆಯ ಭರಾಟೆಯಲ್ಲಿ ಬಹುಸಂಖ್ಯಾತರನ್ನು ಹತ್ತಿಕ್ಕುತ್ತಿದೆ ಎಂದು ಬಿಜೆಪಿ ನಾಯಕರು, ಸಂಘಪರಿವಾರದ ಸಂಘಟನೆಗಳ ಮುಖಂಡರು ಆರೋಪಿಸುತ್ತಿದ್ದಾರೆ. ಎಸ್ಡಿಪಿಐ, ಪಿಎಫ್ಐ ಕೂಡ ಇಬ್ಬರು ಸಚಿವರು ಶಾಂತಿ ಕಾಪಾಡುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದೆ. ಈ ಮಧ್ಯೆ ಕಾಂಗ್ರೆಸ್ ಕಾರ್ಯಕರ್ತರು, ನಾಯಕರು ಸಚಿವರ ಬೆಂಬಲಕ್ಕೆ ನಿಂತಿದ್ದಾರೆ.
ಸಚಿವ ರಮಾನಾಥ ರೈ ಮತ್ತು ಯು.ಟಿ.ಖಾದರ್ ಹಾಗು ಹಿರಿಯ ಪೊಲೀಸ್ ಅಧಿಕಾರಿಗಳು ಆರೋಪಿಗಳ ವಿರುದ್ಧ ಕಠಿಣ ಕ್ರಮ, ಗೂಂಡಾ ಕಾಯ್ದೆ, ಗಡಿಪಾರು, ಕೋಕಾ ಕಾಯ್ದೆ ಇತ್ಯಾದಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಪ್ರಕರಣದ ಆರೋಪಿಗಳು ಮಾತ್ರವಲ್ಲ ಸೂತ್ರಧಾರಿಗಳ ವಿರುದ್ಧವೂ ಕ್ರಮ ಜರಗಿಸುವುದು ಅನಿವಾರ್ಯ ಎಂದು ಸಚಿವರು ಹೇಳಿಕೊಂಡಿದ್ದಾರೆ. ಸಚಿವರು, ಸರಕಾರ ಪೊಲೀಸ್ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಎಂದು ವಿಪಕ್ಷಗಳು ಆರೋಪಿಸಿದರೆ, ನಾವು ಜಿಲ್ಲಾಡಳಿತ ಅಥವಾ ಪೊಲೀಸ್ ಇಲಾಖೆಯ ಮೇಲೆ ಹಸ್ತಕ್ಷೇಪ ಮಾಡಿಲ್ಲ. ಅವರು ಸೂಕ್ತ ಕ್ರಮ ಕೈಗೊಳ್ಳಲು ಅಥವಾ ತನಿಖೆ ನಡೆಸಲು ಸರ್ವ ಸ್ವತಂತ್ರರು ಎಂದು ಸಚಿವರು ಹೇಳಿಕೊಂಡಿದ್ದಾರೆ.
ಅಷ್ಟೇ ಅಲ್ಲ, ಪ್ರಕರಣದ ಸೂತ್ರಧಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಪದೇ ಪದೇ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಹಾಗಿದ್ದರೆ, ಸೂತ್ರಧಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳು ಯಾಕೆ ಮುಂದಾಗುತ್ತಿಲ್ಲ? ಅವರಿಗೆ ಧೈರ್ಯ ಸಾಲುತ್ತಿಲ್ಲವೇ? ಅಹಿತಕರ ಘಟನೆ ನಡೆಯಬಹುದು ಎಂಬ ಆತಂಕವೇ? ಹೀಗೆ ಪ್ರಶ್ನೆಗಳ ಮೇಲೆ ಪ್ರಶ್ನೆ ಏಳುತ್ತಿವೆ. ಕಾನೂನು ಎಲ್ಲರಿಗೂ ಅನ್ವಯ. ಹಾಗಾಗಿ ಪ್ರಕರಣದ ಸೂತ್ರಧಾರಿಗಳ ಬಂಧನವಾಗಬೇಕು ಎಂದು ಜನರು ಆಗ್ರಹಿಸಿದರೆ, ಬಂಧಿಸಿದರೆ ಜೋಕೆ ಎಂದು ಕೆಲವು ರಾಜಕೀಯ ಪಕ್ಷಗಳು ಎಚ್ಚರಿಸುತ್ತದೆ.