ಗೌರಿ ಲಂಕೇಶ್ ಹತ್ಯಾ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಪಿಎಫ್ಐ ಧರಣಿ
ಮಂಗಳೂರು, ಸೆ. 6: ಹೋರಾಟಗಾರ್ತಿ ಹಾಗೂ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರ ಕೊಲೆ ಆರೋಪಿಗಳನ್ನು ಶೀಘ್ರ ಪತ್ತೆ ಹಚ್ಚಿ ಬಂಧಿಸಬೇಕೆಂದು ಆಗ್ರಹಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ವತಿಯಿಂದ ಬುಧವಾರ ನಗರದ ಪುರಭವನ ಬಳಿ ಗಾಂಧಿಪ್ರತಿಮೆ ಎದುರು ಧರಣಿ ನಡೆಯಿತು.
ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದ ಪಿಯುಸಿಎಲ್ ರಾಷ್ಟ್ರೀಯ ಉಪಾಧ್ಯಕ್ಷ ಪಿ.ಬಿ.ಡೇಸಾ ಅವರು, ದೇಶಪ್ರೇಮಿಗಳೆಂದು ಕರೆಸಿಕೊಳ್ಳುತ್ತಿರುವ ಕ್ರಿಮಿನಲ್ಗಳಿಂದ ಗೌರಿ ಲಂಕೇಶ್ ಅವರ ಹತ್ಯೆ ನಡೆದಿದೆ ಎಂದು ಆರೋಪಿಸಿದರು. ಹಿಂದೂಗಳ ಹತ್ಯೆ ನಡೆದರೆ ಪ್ರತಿಭಟನೆಗೆ ಇಳಿಯುವ ಆರೆರೆಸ್, ಸಂಘಪರಿವಾರದ ಸಂಘಟನೆಗಳು ಗೌರಿ ಲಂಕೇಶ್ ಅವರ ಕೊಲೆಯನ್ನು ವಿರೋಧಿಸಿ ಯಾಕೆ ಪ್ರತಿಭಟನೆ ನಡೆಸಿಲ್ಲ ಎಂದು ಪ್ರಶ್ನಿಸಿರುವ ಅವರು, ಇಂತಹ ಶಕ್ತಿಗಳಿಂದಲೇಗೌರಿ ಲಂಕೇಶ್ ಅವರ ಹತ್ಯೆ ನಡೆದಿದೆ ಎಂದು ಭಾವಿಸಬೇಕಾಗುತ್ತದೆ ಎಂದರು. ವಿಚಾರವಾದಿಗಳನ್ನು ಕೊಲ್ಲುವ ಕೋಮುವಾದಿ ಶಕ್ತಿಗಳನ್ನು ಮಟ್ಟಹಾಕಬೇಕಾಗಿದೆ. ತಮ್ಮನ್ನು ದೇಶಪ್ರೇಮಿಗಳೆಂದು ಕರೆಸಿಕೊಳ್ಳುವ ಸಂಘಟನೆಗಳ ಕಾರ್ಯಕರ್ತರು ಗಾಂಧೀಜಿಯವರನ್ನೇ ಕೊಂದು ಹಾಕಿದ್ದಾರೆ. ಇದು ದೇಶಪ್ರೇಮವೇ ಎಂದು ಡೇಸಾ ಪ್ರಶ್ನಿಸಿದರು.
ಪಿಎಫ್ಐ ರಾಜ್ಯ ಸಮಿತಿ ಸದಸ್ಯ ರಝಾಕ್ ಕೆಮ್ಮಾರ, ಪಿಎಫ್ಐ ದ.ಕ. ಜಿಲ್ಲಾ ಕಾರ್ಯದರ್ಶಿ ಅಶ್ರಫ್ ಎ.ಕೆ. ಮಾತನಾಡಿದರು.
ಪಿಎಫ್ಐ ದ.ಕ.ಜಿಲ್ಲಾಧ್ಯಕ್ಷ ನವಾಝ್ ಉಳ್ಳಾಲ್, ಎಸ್ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಜಲೀಲ್ ಕೆ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಎಂ.ಅಥಾವುಲ್ಲಾ, ಯುನಿವೆಫ್ ಕರ್ನಾಟಕ ಇದರ ರಾಜ್ಯಾಧ್ಯಕ್ಷ ರಫೀವುದ್ದೀನ್ ಕುದ್ರೋಳಿ, ಡಬ್ಯುಐಎಂ ರಾಜ್ಯ ಕಾರ್ಯದರ್ಶಿ ಆಯಿಶಾ ಬಜ್ಪೆ ಮೊದಲಾದವರು ಉಪಸ್ಥಿತರಿದ್ದರು.