ಮಾಜಿ ಡಿವೈಎಸ್ಪಿ ಅನುಪಮಾ ಶೆಣೈಯಿಂದ ಹೊಸ ಪಕ್ಷ ಕಟ್ಟುವ ಘೋಷಣೆ
ಉಡುಪಿ, ಅ.3: ಹೊಸ ರಾಜಕೀಯ ಪಕ್ಷವನ್ನು ಕಟ್ಟುವ ಘೋಷಣೆ ಮಾಡಿರುವ ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ, ಈ ಸಂಬಂಧ ಸಮಾನ ಮನಸ್ಕರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಲಾಗಿದ್ದು, ಒಂದು ತಿಂಗಳೊಳಗೆ ಅಭಿಪ್ರಾಯಗಳನ್ನು ಪಡೆದು ನಿರ್ಧಾರಕ್ಕೆ ಬರಲಾಗುವುದು ಎಂದು ತಿಳಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅನುಪಮಾ ಶೆಣೈ, ರಾಜೀನಾಮೆ ನೀಡಿದ ನಂತರ ಹಲವಾರು ಮಂದಿ ಭೇಟಿ ಮಾಡಿದರು ಹಾಗೂ ದೂರವಾಣಿ ಕರೆ ಮಾಡಿ ಮಾತನಾಡಿದರು. ಹೊಸ ಪಕ್ಷದ ಬಗ್ಗೆಯೂ ಯೋಚನೆ ಕೊಟ್ಟರು. ಗಾಂಧಿ ಜಯಂತಿ ದಿನವೇ ಮೊದಲ ಸಭೆಯನ್ನು ಮಾಡಲಾಗಿದೆ. ಗಾಂಧೀಜಿ ಕಂಡ ಗ್ರಾಮ ಸ್ವರಾಜ್ಯದ ಕನಸನ್ನು ನನಸು ಮಾಡುವುದು ನನ್ನ ಕನಸಾಗಿದೆ ಎಂದರು.
ಎಲ್ಲ ಅಂದು ಕೊಂಡಂತೆ ಆದರೆ ಬಳ್ಳಾರಿಯಿಂದಲೇ ಚುನಾವಣೆಗೆ ಸ್ಪರ್ಧಿಸುತ್ತೇನೆ. ಅಲ್ಲಿ ನನಗೆ ಹೆಚ್ಚು ಜನರ ಬೆಂಬಲವಿದೆ. ಪರಮೇಶ್ವರ್ ನಾಯ್ಕಾ ವಿರುದ್ಧ ಸ್ಪರ್ಧೆ ಮಾಡಬೇಕೆಂದಿದ್ದೇನೆ. ಆದರೆ ಜನರ ನಿರ್ಧಾರ ಮುಖ್ಯ. ಬೇರೆ ರಾಜಕೀಯ ಪಕ್ಷದ ಜೊತೆ ಎಂದಿಗೂ ಸೇರುವುದಿಲ್ಲ ಎಂದು ಅನುಪಮಾ ಶೆಣೈ ಸ್ಪಷ್ಟಪಡಿಸಿದರು.
ಭ್ರಷ್ಟ ರಾಜಕೀಯ ವ್ಯವಸ್ಥೆಯ ಒಳಗೆ ಹೊಕ್ಕಿ ಪೊಲೀಸಿಂಗ್ ಮಾಡಬೇಕಾಗಿದೆ. ಪೊಲೀಸಿಂಗ್ ಕೆಲಸ ಮಾಡುವಾಗ ನನ್ನ ಮೇಲೆ ರಾಜಕೀಯ ಪ್ರಯೋಗ ಮಾಡಿದರು. ಈಗ ರಾಜಕಾರಣಿಗಳ ಮೇಲೆ ಪೊಲೀಸಿಂಗ್ ಪ್ರಯೋಗ ಮಾಡಬೇಕೆಂದಿದ್ದೇನೆ. ರಾಜಕಾರಣಿಗಳು ವಿಧಾನಸೌಧದ ಒಳಗೆ ಪೊಲೀಸರಂತೆ ಕೆಲಸ ಮಾಡಬೇಕಾಗಿದೆ ಎಂದು ಅವರು ಹೇಳಿದರು.