ಅನಂತ್ಕುಮಾರ್ ಹೆಗಡೆ ಸಂಸದ ಸ್ಥಾನ ಅನರ್ಹತೆಗೆ ಆಗ್ರಹ
ಬೆಂಗಳೂರು, ಮಾ.6: ಇಸ್ಲಾಮ್ ಧರ್ಮ ಹಾಗೂ ಮುಸ್ಲಿಮರ ವಿರುದ್ಧ ನಿಂದನಾತ್ಮಕ ಹೇಳಿಕೆ ನೀಡಿರುವ ಉತ್ತರ ಕನ್ನಡ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆಯನ್ನು ಸಂಸದ ಸ್ಥಾನದಿಂದ ವಜಾಗೊಳಿಸಬೇಕು ಎಂದು ಅಖಿಲ ಭಾರತ ಇಮಾಮ್ ಕೌನ್ಸಿಲ್ ಆಗ್ರಹಿಸಿದೆ.
ರವಿವಾರ ನಗರದ ಪುರಭವನದ ಎದುರು ಅನಂತ್ಕುಮಾರ್ ಹೆಗಡೆ ವಿರುದ್ಧ ಪ್ರತಿಭಟನೆ ನಡೆಸಿದ ವೌಲಾನ ಗಳು, ಜಗತ್ತಿಗೆ ಶಾಂತಿ, ಸಹೋದರತೆಯ ಸಂದೇಶವನ್ನು ಸಾರಿರುವ ಇಸ್ಲಾಮ್ ಧರ್ಮದ ಬಗ್ಗೆ ಜನಪ್ರತಿನಿಧಿಯಾಗಿರುವ ಸಂಸದ ನೀಡಿರುವ ಹೇಳಿಕೆ ಅತ್ಯಂತ ಖಂಡನಾರ್ಹ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭಯೋತ್ಪಾದನೆಗೆ ಯಾವುದೇ ಧರ್ಮ, ಜಾತಿಯಿಲ್ಲ. ದೇಶದ ಐಕ್ಯತೆ, ಸಾರ್ವಭೌಮತೆಗೆ ಧಕ್ಕೆ ತರುವ ಪ್ರಯತ್ನವನ್ನು ಯಾರೇ ಮಾಡಿದರೂ ಅದು ತಪ್ಪು. ಆದರೆ, ಸಂವಿಧಾನದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸುವ ಸಂಸದರು ಇಸ್ಲಾಮ್ ಹಾಗೂ ಮುಸ್ಲಿಮರ ಬಗ್ಗೆ ನೀಡಿರುವ ಹೇಳಿಕೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಪ್ರತಿಭಟನಾ ನಿರತರು ಕಿಡಿಕಾರಿದರು.
ಭಾರತದ ಬೆಳವಣಿಗೆ, ಅಭಿವೃದ್ಧಿಯಲ್ಲಿ ಮುಸ್ಲಿಮರ ಕೊಡುಗೆಯೂ ಅಪಾರವಾಗಿದೆ. ದೇಶವನ್ನು ಸಶಕ್ತ, ಸಮರ್ಥವನ್ನಾಗಿಸುವಲ್ಲಿ ನಾವು ಕೈಜೋಡಿಸು ತ್ತಿದ್ದೇವೆ. ಆದರೆ, ನಮ್ಮನ್ನು ದೇಶ ವಿರೋಧಿಗಳಂತೆ ಬಿಂಬಿಸುತ್ತಿರುವುದು ಸರಿಯಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿಗೆ ದೇಶದ ಎಲ್ಲ ಪ್ರಜೆಗಳ ಬಗ್ಗೆ ಕಾಳಜಿಯಿದ್ದರೆ ಈ ರೀತಿ ಸಮಾಜದಲ್ಲಿ ವಿಷಬೀಜವನ್ನು ಬಿತ್ತುತ್ತಿರುವವರ ವಿರು್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾನಿರತರು ಆಗ್ರಹಿಸಿ ದರು.
ವೌಲಾನ ಯೂಸುಫ್ ರಶಾದಿ, ವೌಲಾನ ಅಮ್ಜದ್ ಸಾಬ್, ವೌಲಾನ ಸೈಫುಲ್ಲಾ, ಪಿಎಫ್ಐ ರಾಜ್ಯ ಕಾರ್ಯ ದರ್ಶಿ ಶಾಫಿ ಬೆಳ್ಳಾರೆ, ಫಾರೂಖ್ ಮತ್ತಿತರರು ನೇತೃತ್ವ ವಹಿಸಿದ್ದರು.