ನೈಋತ್ಯ ಪದವೀಧರ ಕ್ಷೇತ್ರ: ಜೆಡಿಎಸ್ ಅಭ್ಯರ್ಥಿ ಬೋಜೇಗೌಡರಿಂದ ಕುಶಾಲನಗರದಲ್ಲಿ ಮತಯಾಚನೆ
ಮಡಿಕೇರಿ,ಮೇ.24: ನೈಋತ್ಯ ಪದವೀಧರರ ಕ್ಷೇತ್ರದ ಜಾತ್ಯತೀತ ಜನತಾದಳ ಪಕ್ಷದ ಅಭ್ಯರ್ಥಿ, ಬಾರ್ ಕೌನ್ಸಿಲ್ ಆಫ್ ಇಂಡಿಯಾದ ಮಾಜಿ ಉಪಾಧ್ಯಕ್ಷರಾದ ಎಸ್.ಎಲ್.ಬೋಜೇಗೌಡ ಅವರು ಕುಶಾಲನಗರದ ಪಾಲಿಟೆಕ್ನಿಕ್ ಕಾಲೇಜ್ನಲ್ಲಿ ಮತಯಾಚಿಸಿದರು.
ಕರ್ನಾಟಕ ರಾಜ್ಯ ವಿಧಾನ ಪರಿಷತ್ ಚುನಾವಣೆ ಅಂಗವಾಗಿ ಜೆಡಿಎಸ್ ಅಭ್ಯರ್ಥಿಯಾದ ಬೋಜೆಗೌಡ ಅವರು ಕೊಡಗು ಜಿಲ್ಲಾ ಜೆಡಿಎಸ್ ಅಧ್ಯಕ್ಷರಾದ ಸಂಕೇತ್ ಪೂವಯ್ಯನವರ ಮುಂದಾಳತ್ವದಲ್ಲಿ ಕೊಡಗಿನ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಮತಯಾಚನೆ ನಡೆಸಿದರು.
ನೈಋತ್ಯ ಶಿಕ್ಷಕರ ಕ್ಷೇತ್ರಕ್ಕೆ ಸ್ಪರ್ಧಿಸಿರುವ ಬೋಜೆಗೌಡ ಅವರು ರಾಜಕೀಯ ಕುಟುಂಬದ ಹಿನ್ನೆಲೆಯಿಂದ ಬಂದವರಾಗಿದ್ದು, ಪ್ರಸ್ತುತ ಜೆಡಿಎಸ್ ಪಕ್ಷದ ರಾಜ್ಯ ವಕ್ತಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಶಿಕ್ಷಕರು ಮತ್ತು ಶಿಕ್ಷಕರ ಕ್ಷೇತ್ರದ ಅನೇಕ ಸಮಸ್ಯೆಗಳು ಇಂದಿಗೂ ಜೀವಂತವಾಗಿದ್ದು, ಮುಂದೆ ಆಯ್ಕೆಯಾದ ನಂತರ ಸಮಸ್ಯೆಗಳ ಪರಿಹಾರಕ್ಕೆ ವಿಶೇಷ ಗಮನ ಹರಿಸುವುದಾಗಿ ಬೋಜೆಗೌಡ ತಿಳಿಸಿದ್ದಾರೆ.
ಮತಯಾಚನೆ ಸಂದರ್ಭ ಜೆಡಿಎಸ್ನ ವೀರಾಜಪೇಟೆ ಕ್ಷೇತ್ರದ ಅಧ್ಯಕ್ಷ ಎಸ್.ಹೆಚ್. ಮತೀನ್, ವೀರಾಜಪೇಟೆ ನಗರಾಧ್ಯಕ್ಷ ಮಂಜುನಾಥ್, ಯುವ ಜೆಡಿಎಸ್ ಅಧ್ಯಕ್ಷ ಅಮ್ಮಂಡ ವಿವೇಕ್, ಜಿಲ್ಲಾ ಮಹಿಳಾ ಉಪಾಧ್ಯಕ್ಷೆ ಜಯಮ್ಮ, ಕುಶಾಲನಗರ ನಗರಾಧ್ಯಕ್ಷ ಆನಂದ್ ಮೊದಲಾದವರು ಹಾಜರಿದ್ದರು.