ರಷ್ಯಾದ ಮೌಂಟ್ ಎಲ್ಬ್ರಸ್ ನಲ್ಲಿ ಭಾರತದ ಧ್ವಜ ನೆಟ್ಟ ಕೊಡಗಿನ ಯುವತಿ
ಸಾಧನೆಯ ಶಿಖರವನ್ನೇರಿದ ಮಂಗಳೂರಿನ ಸೈಂಟ್ ಆ್ಯಗ್ನೆಸ್ ಕಾಲೇಜ್ ಹಳೆ ವಿದ್ಯಾರ್ಥಿನಿ
ಮಡಿಕೇರಿ, ನ.13: ರಷ್ಯಾದ ಅತಿ ಎತ್ತರದ ಮೌಂಟ್ ಎಲ್ಬ್ರಸ್ ಪರ್ವತದ ಮೇಲೆ ಭಾರತದ ರಾಷ್ಟ್ರಧ್ವಜವನ್ನು ನೆಟ್ಟು ಬರುವ ಮೂಲಕ ಕೊಡಗಿನ ಯುವತಿಯೊಬ್ಬಳು ಸಾಧನೆಯ ಶಿಖರವನ್ನೇರಿ ಎಲ್ಲರ ಗಮನ ಸೆಳೆದಿದ್ದಾರೆ.
ಕೊಡಗಿನ ನಾಪೋಕ್ಲು ಸಮೀಪದ ಪೆರೂರು ಗ್ರಾಮದ ತೆಕ್ಕಡ ನಂಜುಂಡ-ಪಾರ್ವತಿ ದಂಪತಿಯ ಪುತ್ರಿ ಭವಾನಿ ಎಂಬಾಕೆಯೇ ರಷ್ಯಾದ 5,642 ಮೀಟರ್ ಎತ್ತರದ ಮೌಂಟ್ ಎಲ್ಬ್ರಸ್ ಪರ್ವತವನ್ನೇರಿ ಬಂದ ಪರ್ವತಾರೋಹಿಯಾಗಿದ್ದಾರೆ.
ಮೆಕ್ಸಿಕೋ, ಫ್ರೆಂಚ್, ರೋಮಿನಿಯಾ ಪರ್ವತಾರೋಹಿಗಳ ನಡುವೆ ಭಾರತವನ್ನು ಭವಾನಿ ಪ್ರತಿನಿಧಿಸಿದ್ದರು. ನಾಲ್ವರು ಪರ್ವತಾರೋಹಿಗಳಿಗೆ ರಷ್ಯಾದಲ್ಲಿ ಮೂರು ದಿನಗಳ ಕಾಲ ತರಬೇತಿಯನ್ನು ನೀಡಲಾಗಿತ್ತು.
ಎಲ್ಬ್ರಸ್ ಪರ್ವತವು ರಷ್ಯಾದ ಅತಿ ಎತ್ತರದ ಪರ್ವತವಾಗಿದ್ದು, ಯೂರೋಪ್ ದೇಶಗಳ ಪೈಕಿ ಇದು ಅತಿ ಎತ್ತರದ 10ನೇ ಪರ್ವತವಾಗಿದೆ. ಆದರೆ ಹಿಮಚ್ಚಾದಿತ ಈ ಪರ್ವತವನ್ನು ನಿರಂತರವಾಗಿ ಏರಿ ಸುಮಾರು 8 ಗಂಟೆಗಳಲ್ಲಿ ತುತ್ತ ತುದಿಯಲ್ಲಿ ಭಾರತದ ಬಾವುಟವನ್ನು ಹಾರಿಸುವಲ್ಲಿ ಭವಾನಿ ಯಶಸ್ವಿಯಾಗಿದ್ದು, ಪರ್ವತವೇರಿದ ಭಾರತದ ವೇಗದ ಹುಡುಗಿ ಎಂಬ ಪ್ರಶಂಸೆಗೂ ಪಾತ್ರರಾಗಿದ್ದಾರೆ.
ನಾಲ್ಕು ದೇಶಗಳ ನಾಲ್ವರು ಪರ್ವತಾರೋಹಿಗಳ ಪೈಕಿ ಪರ್ವತದ ತುತ್ತ ತುದಿ ತಲುಪಿದ ಮೊದಲಾಕೆ ಭವಾನಿಯಾಗಿದ್ದಾರೆ. ಅಷ್ಟೇ ಅಲ್ಲದೆ ಮೂವರು ಪುರುಷ ಪರ್ವತಾರೋಹಿಗಳ ನಡುವೆ ಅವರಿಗೆ ಸರಿಸಮಾನವಾಗಿ ಮತ್ತು ಅವರಿಗಿಂತ ಮೊದಲೇ ಪರ್ವತದ ತುತ್ತತುದಿಯನ್ನು ತಲುಪಿದ್ದು ಕೂಡ ಸಾಧನೆಯಾಗಿದೆ.
ಅಕ್ಟೋಬರ್ 18ರಂದು ನಡುರಾತ್ರಿ ಪರ್ವತಾರೋಹಣ ಆರಂಭಿಸಿದ್ದು, ಕೊರೆಯುವ ಚಳಿ, ಹಿಮದ ಮೇಲೆಯೇ ನಿರಂತರವಾಗಿ ಹೆಜ್ಜೆ ಹಾಕುತ್ತಾ ಮುಂದೆ ಸಾಗಿದ ನಾಲ್ವರ ತಂಡ ಅಕ್ಟೋಬರ್ 19ರಂದು ಬೆಳಿಗ್ಗೆ 9.30ಕ್ಕೆ ಮೌಂಟ್ ಎಲ್ಬ್ರಸ್ಟಿ ತುತ್ತ ತುದಿ ತಲುಪುವ ಮೂಲಕ ಸಾಧನೆಯ ಶಿಖರವೇರಿದ ಸಂಭ್ರಮದಲ್ಲಿ ತೇಲಿದ್ದರು.
ಭವಾನಿ ಅವರಿಗೆ ಮೊದಲಿನಿಂದಲೂ ಪರ್ವತಾರೋಹಣದಲ್ಲಿ ಹೆಚ್ಚಿನ ಆಸಕ್ತಿಯಿದ್ದು, ಅದರಲ್ಲೇ ಏನಾದರೊಂದು ಸಾಧಿಸಬೇಕು ಎಂಬ ಛಲವೂ ಇದೆ. ಮುಂದಿನ ದಿನಗಳಲ್ಲಿ ವಿಶ್ವದ ಅತಿ ಎತ್ತರವಾದ ಮೌಂಟ್ ಎವರೆಸ್ಟ್ ಏರುವ ಹಂಬಲವೂ ಇದೆ. ಆದರೆ ಅದು ಅಷ್ಟು ಸುಲಭವಲ್ಲ. ಅದಕ್ಕೆ ಪೂರ್ವ ತಯಾರಿ, ತರಬೇತಿ, ಜತೆಗೆ ಹೆಚ್ಚಿನ ಆರ್ಥಿಕ ನೆರವಿನ ಅಗತ್ಯವೂ ಇದೆ. ಸರ್ಕಾರ, ಸಂಘ ಸಂಸ್ಥೆಗಳು ಸಹಕಾರ ನೀಡಿದರೆ ಮೌಂಟ್ ಎವರೆಸ್ಟ್ ಏರುವುದಾಗಿ ಭವಾನಿ ಹೇಳುತ್ತಾರೆ. ಈಗಾಗಲೇ ಉತ್ತರ ಭಾರತದ ಡಾರ್ಜಲಿಂಗ್ನಲ್ಲಿ ಯಶಸ್ವಿಯಾಗಿ ಪರ್ವತಾರೋಹಣ ಮಾಡಿ ಗಮನಸೆಳೆದಿದ್ದಾರೆ.
ಭವಾನಿ ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ಶ್ರೀಮಂಗಲದ ಜೆಸಿ ಶಾಲೆಯಲ್ಲಿ, ಬಳಿಕ ಗಾಳಿಬೀಡುವಿನ ಜವಾಹರ ನವೋದಯ ವಿದ್ಯಾಲಯದಲ್ಲಿ ಮುಗಿಸಿ ಮಂಗಳೂರಿನ ಸೈಂಟ್ ಅ್ಯಗ್ನೆಸ್ ಕಾಲೇಜಿನಲ್ಲಿ ಪದವಿ ಮುಗಿಸಿ ಇದೀಗ ಡಾರ್ಜಲಿಂಗ್ನ ಹಿಮಾಲಯ ಮೌಂಟೇನಿಯರಿಂಗ್ ಇನ್ಸಿಟ್ಯೂಟ್ನಲ್ಲಿ ಬೋಧಕರಾಗಿ ಕೆಲಸ ಮಾಡುತ್ತಿದ್ದಾರೆ.
ರಕ್ಷಣಾ ಕ್ಷೇತ್ರ, ಸಾಹಸ ಕ್ಷೇತ್ರಗಳತ್ತ ಹೆಚ್ಚಿನ ಆಸಕ್ತಿ ಹೊಂದಿದ್ದ ಅವರು, ಪ್ರೌಢಶಾಲೆಯಿಂದಲೇ ಎನ್ಸಿಸಿ ಸೇರಿ ಕಾಲೇಜಿನಲ್ಲೂ ಮುಂದುವರೆಸಿ ವಿವಿಧ ಕ್ಯಾಂಪ್ಗಳಲ್ಲಿ ಭಾಗವಹಿಸಿ ತರಬೇತಿ ಪಡೆದು 2016ರಲ್ಲಿ ನವದೆಹಲಿಯ ರಾಜಪಥ್ನಲ್ಲಿ ನಡೆದ ಗಣರಾಜ್ಯೋತ್ಸವದ ಪೆರೇಡ್ನಲ್ಲಿ ಭಾಗವಹಿಸಿದ್ದರು.
ಇನ್ನು ಜೋದ್ಫುರ್ ನಲ್ಲಿ ನಡೆದ ವಾಯುದಳದ ಅಖಿಲ ಭಾರತ ವಾಯು ಸೈನಿಕ್ ಶಿಬಿರದಲ್ಲೂ ಪಾಲ್ಗೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ, ಎನ್ಸಿಸಿಯ ಡೈರೆಕ್ಟರ್ ಜನರಲ್ ಲೆ.ಜ. ಅನಿರುದ್ಧ ಚಕ್ರವರ್ತಿ, ಕರ್ನಾಟಕ, ಗೋವಾ ಎನ್ಸಿಸಿ ಡೆಪ್ಯೂಟಿ ಡೈರೆಕ್ಟರ್ ಜನರಲ್ ಏರ್ ಕಮಾಂಡರ್ ಸಿ.ರಾಜೀವ್ ಅವರಿಂದ ಶ್ಲಾಘನೆಗೆ ಪಾತ್ರರಾಗಿದ್ದಾರೆ.
ಪರ್ವಾತಾರೋಹಣದಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವ ಭವಾನಿ ಅವರು, ಪ್ರಾಥಮಿಕ ತರಬೇತಿಯನ್ನು ಮನಾಲಿಯ ಅಟಲ್ ಬಿಹಾರಿ ವಾಜಪೇಯಿ ಇನ್ಸ್ ಟ್ಯೂಟ್ ಆಫ್ ಮೌಂಟೇನರಿಂಗ್ ಆಲೈಡ್ ಸ್ಪೋರ್ಟ್ಸ್(ಎಬಿವಿಐಎಂಎಎಸ್) ಪಡೆದಿದ್ದಾರೆ. ಆ ನಂತರ ಹೆಚ್ಚಿನ ತರಬೇತಿಯನ್ನು ಡಾರ್ಜಲಿಂಗ್ನ ಹಿಮಾಲಯ ಮೌಂಟೇನಿಯರಿಂಗ್ ಇನ್ಸಿಟ್ಯೂಟ್(ಹೆಚ್ಎಂಐ) ಪಡೆದಿದ್ದಾರೆ.
ಹಿಮಾಲಯ ಮೌಂಟೇನಿಯರಿಂಗ್ ಇನ್ಸಿಟ್ಯೂಟ್ನಿಂದ ಈಗಾಗಲೇ ಹಿಮಾಲಯ ಪರ್ವತ ಸೇರಿದಂತೆ ಹಲವು ಕಠಿಣ ಪರ್ವತಗಳಲ್ಲಿ ಪರ್ವತಾರೋಹಣ ನಡೆಸಿದ್ದು, ಈ ಪೈಕಿ ಅತ್ಯಂತ ಕಠಿಣವಾಗಿರುವ ಪ್ರಥಮ ದರ್ಜೆಯ ತರಬೇತಿಯನ್ನು ಯಶಸ್ವಿಯಾಗಿ ಮುಗಿಸುವ ಮೂಲಕ ಇಂತಹ ತರಬೇತಿಯನ್ನು ಪೂರೈಸಿದ ಏಕೈಕ ಯುವತಿ ಎಂಬ ಖ್ಯಾತಿಯನ್ನು ಪಡೆದುಕೊಂಡಿದ್ದಾರೆ. ಈಗಾಗಲೇ ಉತ್ತರಾಖಾಂಡ್ನ ರುಡುಗೈರ್, ಮನಾಲಿಯ ಫ್ರೆಂಡ್ಶಿಪ್, ಸಿಕ್ಕಿಮ್ನ ರೆನಾಕ್, ಲೇಹ್ನ ಸ್ಟಾಕ್ ಕಂಗ್ರಿಯಲ್ಲಿ ಮಂಜುಗಡ್ಡೆಯ ಪರ್ವತಗಳನ್ನೇರಿ ಯಶಸ್ಸು ಸಾಧಿಸಿದ್ದು, ಈಜು, ಕುದುರೆ ಸವಾರಿ, ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ಹಲವು ತರಬೇತಿಗಳನ್ನು ಪಡೆದಿದ್ದಾರೆ.