ಪ್ರಶ್ನೆ ಪತ್ರಿಕೆ ಸೋರಿಕೆ: ಪೊಲೀಸ್ ನೇಮಕಾತಿ ಪರೀಕ್ಷೆ ಮುಂದೂಡಿಕೆ
ಓರ್ವನ ಬಂಧನ
ಸಾಂದರ್ಭಿಕ ಚಿತ್ರ
ಬೆಂಗಳೂರು, ನ.24: ನಾಗರಿಕ ಪೊಲೀಸ್ ಪೇದೆ ಲಿಖಿತ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದು, ಇಂದು(ನ.25) ನಡೆಯಬೇಕಿದ್ದ ಪರೀಕ್ಷಾ ಪ್ರಕ್ರಿಯೆಯನ್ನು ಮುಂದೂಡಲಾಗಿದ್ದು, ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ಓರ್ವನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶಿವಕುಮಾರ್ ಎಂಬಾತ ಬಂಧಿತ ಆರೋಪಿಯಾಗಿದ್ದು, ಈತ ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಪ್ರಮುಖ ರೂವಾರಿ. ಇದೇ ಪ್ರಕರಣದಲ್ಲಿ ಬಸವರಾಜು ಎಂಬ ಮತ್ತೋರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.
ನ.25ರಂದು ನಾಗರಿಕ ಪೊಲೀಸ್ ಪೇದೆ ಹುದ್ದೆಗೆ ಲಿಖಿತ ಪರೀಕ್ಷೆ ನಡೆಸುವ ಸಂಬಂಧ ದಿನಾಂಕ ನಿಗದಿಯಾಗಿತ್ತು. ಆದರೆ, ಆರೋಪಿ ಶಿವಕುಮಾರ್, ಪ್ರಶ್ನೆ ಪತ್ರಿಕೆ ಇರುವುದಾಗಿ ತಿಳಿಸಿ ರಾಜ್ಯದ ವಿವಿಧ ಭಾಗಗಳಿಂದ 116 ಅಭ್ಯರ್ಥಿಗಳನ್ನು ಕೊಡಗು ಜಿಲ್ಲೆಯ ಸೋಮವಾರ ಪೇಟೆ ತಾಲೂಕಿನ ಶನಿವಾರ ಸಂತೆಯ ಕಲ್ಲಮಠದ ನಂಜುಂಡೇಶ್ವರ ವಿದ್ಯಾಮಂದಿರ ಕೊಠಡಿಯೊಂದರಲ್ಲಿ ಗುಂಪು ಸೇರಿಸಿದ್ದ ಎಂದು ಸಿಸಿಬಿ ಹೇಳಿದೆ.
ಈ ಬಗ್ಗೆ ಮಾಹಿತಿ ಸಂಗ್ರಹಿಸಿದ ಸಿಸಿಬಿ ಎಸಿಪಿಗಳಾದ ಬಿ.ಆರ್. ವೇಣುಗೋಪಾಲ್ ಮತ್ತು ಬಿ.ಬಾಲರಾಜು ಅವರ ನೇತೃತ್ವದ 2 ವಿಶೇಷ ತಂಡ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ವೇಳೆ ಆರೋಪಿ ಶಿವಕುಮಾರ್ ಅನ್ನು ಪ್ರಶ್ನೆಪತ್ರಿಕೆ ಸಮೇತ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದಲ್ಲದೆ, ಅಕ್ರಮವಾಗಿ ಗುಂಪು ಸೇರಿದ್ದ 116 ಅಭ್ಯರ್ಥಿಗಳು, 7 ಚಾಲಕರು, 4 ಮಿನಿ ಬಸ್, ಒಂದು ಕಾರು ಅನ್ನು ಜಪ್ತಿ ಮಾಡಲಾಗಿದೆ ಎಂದು ತಿಳಿದುಬಂದಿದೆ.
6-8 ಲಕ್ಷ ರೂ.: ಪರೀಕ್ಷಾ ಪ್ರಶ್ನೆ ಪತ್ರಿಕೆ ಮತ್ತು ಉತ್ತರಗಳನ್ನು ತಿಳಿಸಲು ಓರ್ವ ಅಭ್ಯರ್ಥಿಯಿಂದ 6 ರಿಂದ 8 ಲಕ್ಷ ರೂ.ಗಳನ್ನು ಆರೋಪಿ ಶಿವಕುಮಾರ್ ಪಡೆದಿದ್ದ ಎನ್ನುವ ಮಾಹಿತಿ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಈ ಸಂಬಂಧ ಬೆಂಗಳೂರು ನಗರ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.
ಪರೀಕ್ಷೆ ಮುಂದೂಡಿಕೆ
ನ.25ರಂದು ನಡೆಯಬೇಕಿದ್ದ ನಾಗರಿಕ ಪೊಲೀಸ್ ಪೇದೆ-2113 ಹುದ್ದೆಗಳ ಲಿಖಿತ ಪರೀಕ್ಷೆ ಅನ್ನು ಕಾರಣಾಂತರಗಳಿಂದ ಮುಂದೂಡಲಾಗಿದೆ. ಮುಂದಿನ ಲಿಖಿತ ಪರೀಕ್ಷೆ ದಿನಾಂಕವನ್ನು ಮೊಬೈಲ್ ಎಸ್ಎಂಎಸ್ ಅಥವಾ ವೆಬ್ಸೈಟ್ನಲ್ಲಿ ಪ್ರಕಟಿಸಲಗುವುದು ಎಂದು ಅಡಿಷನಲ್ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಪೊಲೀಸ್ ಪೇದೆ ನೇಮಕಾತಿ ಸಂಬಂಧ ಲಿಖಿತ ಪರೀಕ್ಷೆಗಾಗಿ ಹಲವು ದಿನಗಳಿಂದ ಕಾಯುತ್ತಿದ್ದೇವೆ. ಆದರೆ, ಕಾರಣಾಂತರಗಳಿಂದ ಮತ್ತೆ ಪರೀಕ್ಷೆ ಮುಂದೂಡಿಕೆ ಆಗಿರುವುದು ಬೇಸರ ತಂದಿದ್ದು, ಮುಂದಿನ ಬಾರಿಯಾದರೂ, ಸೂಕ್ತ ಸಮಯಕ್ಕೆ ನಡೆಯುವಂತೆ ಆಗಲಿ.
-ತಿಪ್ಪೇಶ್, ಲಿಖಿತ ಪರೀಕ್ಷೆ ಅಭ್ಯರ್ಥಿ