ಸಮಸ್ಯೆ ಹೇಳುತ್ತಿದ್ದ ವೇಳೆ ಟೇಬಲ್ ತಟ್ಟಿ ಮಾತನಾಡಿದ ಮಹಿಳೆ: ಮೈಕ್ ಕಿತ್ತುಕೊಂಡ ಸಿದ್ದರಾಮಯ್ಯ
ಮೈಸೂರು,ಜ.28: ಶಾಸಕರು ಸಿಗುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದೆ ಮಹಿಳೆಯೋರ್ವರು ಟೇಬಲ್ ಕುಟ್ಟಿದ್ದು, ಮಹಿಳೆಯ ವರ್ತನೆಗೆ ಸಿದ್ದರಾಮಯ್ಯ ಕೋಪಗೊಂಡ ಘಟನೆ ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ಗರ್ಗೇಶ್ವರಿ ಗ್ರಾಮದಲ್ಲಿ ನಡೆದಿದೆ.
ಗರ್ಗೇಶ್ವರಿ ಗ್ರಾಮದಲ್ಲಿ ಸೋಮವಾರ ಕೆಪಿಟಿಸಿಎಲ್ ಪವರ್ ಎಕ್ಸ್ ಚೇಂಜ್ ಕಾಮಗಾರಿ ಶಂಕುಸ್ಥಾಪನೆಗೂ ಮುನ್ನ ಸಿದ್ದರಾಮಯ್ಯ ಸಾರ್ವಜನಿಕರ ಸಮಸ್ಯೆ ಆಲಿಸುತ್ತಿದ್ದರು. ಈ ವೇಳೆ ಮಾಜಿ ತಾಪಂ ಉಪಾಧ್ಯಕ್ಷೆ ಜಮಲಾರ್ ಸಮಸ್ಯೆ ಹೇಳುತ್ತಿದ್ದರು. ನಂತರ ನಮಗೆ ಶಾಸಕರು ಸಿಗುವುದೇ ಇಲ್ಲ ಎಂದು ಟೇಬಲ್ ಕುಟ್ಟಿದರು. ಇದರಿಂದ ಕೋಪಗೊಂಡ ಸಿದ್ದರಾಮಯ್ಯ ಆಕೆಯ ಕೈಯಿಂದ ಮೈಕ್ ಕಿತ್ತುಕೊಂಡು ತರಾಟೆಗೆ ತೆಗೆದುಕೊಂಡು ಬಾಯಿ ಮುಚ್ಚಿಸಿ ಆಕ್ರೋಶ ವ್ಯಕ್ತಪಡಿಸಿದರು.
"ಏನಮ್ಮ ನಾವೇನು ದೇಶಕ್ಕೆ ಅನ್ಯಾಯ ಮಾಡಿರೋರ ಥರ ಮಾತನಾಡುತ್ತೀಯ, ಟೇಬಲ್ ಕುಟ್ಟಿ ಮಾತನಾಡುತ್ತೀಯ? ನನ್ನ ಮುಂದೇನೆ ಟೇಬಲ್ ಕುಟ್ಟಿ ಮಾತನಾಡುತ್ತೀಯ. ಕುತ್ತೋ ಸುಮ್ಮನೆ" ಎಂದು ಮಹಿಳೆ ಜಮಲಾರ್ ಅವರನ್ನು ತರಾಟೆಗೆ ತೆಗೆದುಕೊಂಡರು. ಕೊನೆಗೆ ಮಹಿಳೆಯ ಬಳಿ ಇದ್ದ ಮೈಕ್ ಕಿತ್ತುಕೊಂಡು ಕೋಪ ಪ್ರದರ್ಶಿಸಿದರು.
ಈ ಸಂದರ್ಭದಲ್ಲಿ ಸಂಸದ ಆರ್.ಧ್ರುವನಾರಾಯಣ, ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ, ಮಾಜಿ ಜಿ.ಪಂ ಅಧ್ಯಕ್ಷ ಕೆ.ಸಿ.ಬಲರಾಂ ಸೇರಿದಂತೆ ಹಲವರು ಉಪಸ್ಥಿತರಿದ್ದರು.