ಕೇಂದ್ರದಿಂದ ಸಂವಿಧಾನ ವಿಕಾರಗೊಳಿಸುವ ಹುನ್ನಾರ: ಮಾವಳ್ಳಿ ಶಂಕರ್
ಸಂವಿಧಾನ ಸಂರಕ್ಷಣಾ ದಿನ-ದಲಿತ ಜಾಗೃತಿ ಸಮಾವೇಶ
ಚಿಕ್ಕಮಗಳೂರು, ಜ.31: ದಲಿತ ಚಳವಳಿಗಳು ಅಂಬೇಡ್ಕರ್ ಅವರ ಧ್ವನಿಯನ್ನು ದಲಿತರ ನಡುವೆ ಕೊಂಡೊಯ್ದು ದಲಿತರಲ್ಲಿ ಪ್ರಶ್ನಿಸುವ ಮನೋಭಾವವನ್ನು ಬಡಿದೆಬ್ಬಿಸುವ ಮೂಲಕ ದಲಿತರು ಮತ್ತು ರೈತರಿಗೆ ಹೋರಾಟದ ಶಕ್ತಿ ನೀಡಿವೆ ಎಂದು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಅಭಿಪ್ರಾಯಿಸಿದರು.
ನಗರದ ಅಂಬೇಡ್ಕರ್ ಭವನದಲ್ಲಿ ದಲಿತ ಸಂಘರ್ಷ ಸಮಿತಿ ವತಿಯಿಂದ ಗುರುವಾರ ಆಯೋಜಿಸಲಾಗಿದ್ದ ವಿಭಾಗ ಮಟ್ಟದ ಸಂವಿಧಾನ ಸಂರಕ್ಷಣಾ ದಿನ ಹಾಗೂ ದಲಿತ ಜಾಗೃತಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಚಳವಳಿಗಳನ್ನು ಕಟ್ಟಲು ಹಿರಿಯರು ಮಾಡಿದ ತ್ಯಾಗ ಬಲಿದಾನಗಳನ್ನು ಹಿಂದಿನ ಯುವಜನತೆ ಸ್ಮರಿಸುವ ಅಗತ್ಯವಿದೆ ಎಂದ ಅವರು ಹಿರಿಯ ಹೋರಾಟದ ಅನುಭವಗಳನ್ನು ತಮ್ಮ ಜೀವನದ ಮಾರ್ಗದರ್ಶಿ ಸೂತ್ರವನ್ನಾಗಿ ಅಳವಡಿಸಿಕೊಳ್ಳಬೇಕು ಎಂದರು.
ಭತ್ತ ಬೆಳೆಯುವ ರೈತ ಬೆತ್ತಲಾಗಿದ್ದಾನೆ. ದೇಶದಲ್ಲಿ ದತ್ತಪೀಠ, ರಾಮಮಂದಿರ ನಿರ್ಮಾಣದ ಹೋರಾಟ ತೀವ್ರಗೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಮಂದಿರ ಮತ್ತು ಧಾರ್ಮಿಕತೆ ಎಂಬ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ಮತ ಗಳಿಕೆಯ ಹುನ್ನಾರ ನಡೆಸುತ್ತಿರುವ ಪಕ್ಷಗಳು ಸಂಕಷ್ಟದಲ್ಲಿರುವ ರೈತ ಮತ್ತು ತಳ ಸಮುದಾಯದ ಜನಗಳನ್ನು ರಕ್ಷಿಸುವಲ್ಲಿ ವಿಫಲವಾಗಿದೆ ಎಂದರು.
ಜಗತ್ತಿನ ಬೇರೆ ಬೇರೆ ದೇಶಗಳು ಬಡತನ ನಿರ್ಮೂಲನೆ, ಲಿಂಗ ತಾರತಮ್ಯ, ಅನಕ್ಷರತೆ ಸೇರಿದಂತೆ ವಿವಿಧ ಪ್ರಗತಿಪರ ವಿಚಾರಗಳನ್ನು ಅಳವಡಿಸಿಕೊಂಡು ಪ್ರಗತಿಪಥದಲ್ಲಿ ಹೆಜ್ಜೆಯನ್ನಿಡುತ್ತದೆ ಆದರೆ ಭಾರತ ಜಾತಿ ಪದ್ದತಿ, ಅಸ್ಪೃಶ್ಯತೆಯ ಪಿಡುಗಿನಿಂದ ನಲುಗುತ್ತಿದೆ. ಸಂವಿಧಾನದ ಮೇಲೆ ನಿರಂತರ ಧಾಳಿಗಳಾಗುತ್ತಿದೆ ಕೇಂದ್ರ ಸರಕಾರ ಪಟ್ಟಭದ್ರ ಹಿತಾಸಕ್ತಿಯ ಶಕ್ತಿಗಳು ಸಂವಿಧಾನವನ್ನು ವಿಕಾರಗೊಳಿಸುವ ಪ್ರಯತ್ನ ನಡೆಸುತ್ತಿವೆ ಸಂವಿಧಾನ ಉಳಿದರೆ ಪ್ರಜಾಪ್ರಭುತ್ವ ಉಳಿಯುತ್ತದೆ. ಆ ನಿಟ್ಟಿನಲ್ಲಿ ದಲಿತರು ಜಾಗೃತರಾಗಬೇಕೆಂದು ಕರೆ ನೀಡಿದರು.
ಜಾತಿ ವ್ಯವಸ್ಥೆಯಲ್ಲಿ ಬಳಲುತ್ತಿದ್ದ ದಲಿತರನ್ನು ಮುಂಚೂಣಿಗೆ ತರಲು ಮೀಸಲಾತಿ ಜಾರಿಗೊಳಿಸಲಾಗಿತ್ತು ಕೇಂದ್ರ ಸರಕಾರ ರಾಜಕೀಯ ಕಾರಣಕ್ಕೆ ಮೇಲ್ಜಾತಿಗಳಿಗೆ ಮೀಸಲಾತಿ ನೀಡುವ ಮೂಲಕ ಮೀಸಲಾತಿ ಪದದ ಅರ್ಥವನ್ನೇ ಹಾಳು ಮಾಡುತ್ತಿದೆ ಎಂದರು.
ಪ್ರಸ್ತಾವಿಕವಾಗಿ ಮಾತನಾಡಿದ ದಸಂಸ ಮುಖಂಡ ಅಮೋಘ್, ಸಂವಿಧಾನವನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ ಎಂದ ಅವರು ಡಾ.ಬಾಬಾಸಾಹೇಬ್ ಅಂಬೇಡ್ಕರ್ರವರ ಸಂವಿಧಾನದ ಆಶಯಗಳನ್ನು ಉಳಿಸಿಕೊಳ್ಳಲು ಮುಂಬರುವ ಚುನಾವಣೆಯಲ್ಲಿ ದಲಿತ ಸಮುದಾಯ ಆಡಳಿತಾರೂಢ ಕೇಂದ್ರ ಸರಕಾರವನ್ನು ಸೋಲಿಸಬೇಕಿದೆ ಎಂದರು.
ಅಂಬೇಡ್ಕರ್ ವಾದಿ ಹಾಗೂ ಬರಹಗಾರ ನಾಗಸಿದ್ದಾರ್ಥ ಹೊಲೆಯಾರ್ ಅಂಬೇಡ್ಕರ್ ವಿಚಾರಗಳ ಕುರಿತು ಪ್ರಧಾನ ಭಾಷಣ ಮಾಡಿದರು. ವೇದಿಕೆಯಲ್ಲಿ ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಮರ್ಲೆ ಅಣ್ಣಯ್ಯ, ರಾಜ್ಯ ಸಂಘಟನಾ ಸಂಚಾಲಕ ಎಲ್ ಚಂದ್ರು, ರಾಜ್ಯ ಸಮಿತಿ ಸದಸ್ಯ ಸುಂದರ್ ಮಾಸ್ತರ್, ರಾಜ್ಯ ಕಲಾಮಂಡಳಿ ಸಂಚಾಲಕ ಬೀಸನಹಳ್ಳಿ ಮೂರ್ತಿ, ರಾಜ್ಯ ಸಮಿತಿಯ ಸದಸ್ಯೆ ಟಿ.ಡಿ ಸುಮಾ, ಹುಣಸೂರು ಪುಟ್ಟಲಕ್ಷ್ಮಿ ಸೇರಿದಂತೆ ಜಿಲ್ಲೆ ಮತ್ತು ರಾಜ್ಯ ಮುಖಂಡರು ಭಾಗವಹಿಸಿದ್ದರು. ಇದಕ್ಕೂ ಮುನ್ನ ಸಂಘದ ಕಾರ್ಯಕರ್ತರು ನಗರದ ಪ್ರಮುಖ ರಸ್ತೆಗಳಲ್ಲಿ ಬೃಹತ್ ಮೆರವಣಿಗೆ ನಡೆಸಿದರು.