ಪಕ್ಷದ ನಾಯಕರ ಮೇಲೆ ತೋರುವ ಅಭಿಮಾನಕ್ಕೆ ಅಪಾರ್ಥ ಬೇಡ: ಬಂಡೆಪ್ಪ ಕಾಶೆಂಪೂರ್
ಕೊಪ್ಪಳ, ಜ.31: ಆಯಾ ಪಕ್ಷದ ನಾಯಕರ ಬಗ್ಗೆ ಸರಕಾರದ ಸಚಿವರು ಅಭಿಮಾನ ತೋರುವುದು ಸಹಜ. ಇದಕ್ಕೆ ಅಪಾರ್ಥ ಕಲ್ಪಿಸುವುದು ಬೇಡವೆಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ್ ತಿಳಿಸಿದರು.
ತಾಲೂಕಿನ ಕೆರೆಹಳ್ಳಿಯಲ್ಲಿ ನಡೆಯುತ್ತಿರುವ ಉದ್ಯೋಗ ಖಾತ್ರಿ ಯೋಜನೆ ವೀಕ್ಷಿಸಿದ ಬಳಿಕ ಮಾತನಾಡಿದ ಅವರು, ನಮ್ಮ ಸರಕಾರದ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್. ನಾವೆಲ್ಲರೂ ಸರಕಾರದ ಸಚಿವರು. ಅವರವರ ನಾಯಕರ ಬಗ್ಗೆ ಸಚಿವರು ತಮ್ಮ ಅಭಿಮಾನಕ್ಕೆ ಹೇಳಿಕೊಳ್ಳುವುದು ಸಹಜವೆಂದು ತಿಳಿಸಿದರು.
ಮೈತ್ರಿ ಸರಕಾರದಲ್ಲಿ ನಾವೆಲ್ಲರೂ ಒಂದಾಗಿ ಕೆಲಸ ಮಾಡುತ್ತಿದ್ದೇವೆ. ಬರಗಾಲ ಪರಿಸ್ಥಿತಿ ಇರುವುದರಿಂದ ಜಿಲ್ಲೆಗಳಿಗೆ ಭೇಟಿ ನೀಡುತ್ತಿದ್ದೇವೆ. ಜನರು ಗುಳೆ ಹೋಗುತ್ತಿರುವುದನ್ನ ತಡೆಗಟ್ಟಲು ಚಿಂತನೆ ನಡೆದಿದೆ. ಉದ್ಯೋಗ ಖಾತ್ರಿಯ ಹಣ ಕೆಲ ಜಿಲ್ಲೆಗಳಲ್ಲಿ ಜಾರಿ ಮಾಡಬೇಕಾಗಿದೆ. ಬರ ಪರಿಸ್ಥಿತಿ ಬಗ್ಗೆ ಅಧ್ಯಯನ ನಡೆಸಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜೊತೆ ಚರ್ಚಿಸುತ್ತೇವೆ ಎಂದರು.
ಈ ವೇಳೆ ಸಚಿವರಾದ ವೆಂಕಟರಾವ್ ನಾಡಗೌಡ, ರಾಜಶೇಖರ್ ಪಾಟೀಲ್, ಪಿ.ಟಿ. ಪರಮೇಶ್ವರ್ ನಾಯ್ಕ ಸೇರಿದಂತೆ ಶಾಸಕ ರಾಘವೇಂದ್ರ ಹಿಟ್ನಾಳ ಹಾಗೂ ಡಿಸಿ ಸುನೀಲ್ ಕುಮಾರ್ ಉಪಸ್ಥಿತರಿದ್ದರು.