ರಘು ಜಾತಿ ಪ್ರಮಾಣ ಪತ್ರ ಗೊಂದಲ; ಒಂದು ತಿಂಗಳೊಳಗೆ ಪರಿಹಾರ: ಆಂಜನೇಯ
ಬೆಂಗಳೂರು, ಜ.12: ಮಂಡ್ಯ ಜಿಲ್ಲೆಯ ಯುವಕ ರಘುವಿನ ಜಾತಿಗೆ ಸಂಬಂಧಿಸಿದಂತೆ ಉಂಟಾಗಿರುವ ಗೊಂದಲ ವನ್ನು ಒಂದು ತಿಂಗಳೊಳಗೆ ಪರಿಹರಿಸುವುದಾಗಿ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಭರವಸೆ ನೀಡಿದ್ದಾರೆ.
ಮಂಗಳವಾರ ವಿಧಾನಸೌಧದಲ್ಲಿ ತಮ್ಮನ್ನು ಭೇಟಿಯಾದ ರಘು ಜೊತೆ ಚರ್ಚೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಘುವಿನ ತಾಯಿ ಬುದ್ಧಿಮಾಂದ್ಯೆಯಾಗಿದ್ದು, ಅವರಿಗೆ ತಮ್ಮ ಪತಿಯ ಗುರುತಿಲ್ಲ. ಆದುದರಿಂದ, ಜಾತಿಗೆ ಸಂಬಂಧಿಸಿದಂತೆ ಗೊಂದಲ ಸೃಷ್ಟಿಯಾಗಿದೆ ಎಂದರು.
ರಘು ಅವರ ತಾಯಿ ವಾಸಿಸುತ್ತಿದ್ದ ಕಾಲನಿಯಲ್ಲಿ ಪರಿಶಿಷ್ಟ ಸಮುದಾಯಕ್ಕೆ ಸೇರಿದ ಆದಿ ದ್ರಾವಿಡ ಹಾಗೂ ಆದಿ ಕರ್ನಾಟಕ ಜಾತಿಯವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸ್ಥಳೀಯರು ರಘುವನ್ನು ಬಾಲಮಂದಿರಕ್ಕೆ ಸೇರಿಸಿ ಶಿಕ್ಷಣ ಕೊಡಿಸಿದ್ದಾರೆ ಎಂದು ಅವರು ಹೇಳಿದರು. ಆದರೆ, ಇದೀಗ ಆತನಿಗೆ ಯಾವ ಜಾತಿಯ ಹೆಸರಿನಲ್ಲಿ ಪ್ರಮಾಣಪತ್ರ ನೀಡಬೇಕು ಎಂಬ ಗೊಂದಲವಿದೆ. ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಒಂದು ತಿಂಗಳಲ್ಲಿ ಈ ಬಗ್ಗೆ ಸೂಕ್ತವಾದ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಆಂಜನೇಯ ತಿಳಿಸಿದರು.
ಸರಕಾರದ ವಿರುದ್ಧ ಅಸಮಾಧಾನ: ನನಗೆ ಜಾತಿ ಪ್ರಮಾಣ ಪತ್ರ ನೀಡಲು ಸರಕಾರ ಮತ್ತೊಂದು ಅವಕಾಶ ಕೋರಿದ್ದಾರೆ. ಕಳೆದ ಆರು ತಿಂಗಳುಗಳಿಂದ ನಾನು ಜಾತಿ ಪ್ರಮಾಣ ಪತ್ರಕ್ಕಾಗಿ ಓಡಾಡುತ್ತಿದ್ದೇನೆ. ಆದರೆ, ಯಾವುದೇ ಫಲ ಸಿಗುತ್ತಿಲ್ಲ ಎಂದು ರಘು ಸಚಿವರೊಂದಿಗಿನ ಸಭೆಯ ಬಳಿಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.