ಚಿಕ್ಕೋಡಿ ಕ್ಷೇತ್ರದ ಬಿಜೆಪಿ ಟಿಕೆಟ್ ಘೋಷಣೆ: ಮರು ಪರಿಶೀಲನೆಗೆ ಶಾಸಕ ಉಮೇಶ್ ಕತ್ತಿ ಮನವಿ
ಬೆಳಗಾವಿ, ಮಾ. 29: ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಟಿಕೆಟ್ ಘೋಷಣೆಯನ್ನು ಮರುಪರಿಶೀಲನೆ ಮಾಡಬೇಕು ಎಂದು ಮಾಜಿ ಸಚಿವ ಹಾಗೂ ಹಾಲಿ ಶಾಸಕ ಉಮೇಶ್ ಕತ್ತಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪರಿಗೆ ಮನವಿ ಮಾಡಿದ್ದಾರೆ.
ಶುಕ್ರವಾರ ಚಿಕ್ಕೋಡಿ ಕ್ಷೇತ್ರದ ಟಿಕೆಟ್ ಅಣ್ಣಾ ಸಾಹೇಬ್ ಜೊಲ್ಲೆ ಅವರಿಗೆ ಘೋಷಣೆ ಮಾಡಿದ್ದು, ಇದನ್ನು ಮರು ಪರಿಶೀಲನೆ ನಡೆಸಬೇಕು. ಎ.4ರ ವರೆಗೆ ಕಾದು ನೋಡುತ್ತೇವೆ. ಅನಂತರ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಸ್ಪಷ್ಟನೆ ನೀಡಿದರು.
ನನ್ನ ಸಹೋದರ ರಮೇಶ್ ಕತ್ತಿ ಈ ಹಿಂದೆ ಸಂಸದರಾಗಿ ಕ್ಷೇತ್ರದಲ್ಲಿ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಹೀಗಾಗಿ ಕ್ಷೇತ್ರದ ಜನತೆ ರಮೇಶ್ ಕತ್ತಿ ಅಭ್ಯರ್ಥಿಯಾಗಬೇಕು ಎಂಬ ಅಪೇಕ್ಷೆ. ಆದುದರಿಂದ ಅವರಿಗೆ ಪಕ್ಷ ಟಿಕೆಟ್ ನೀಡಬೇಕಿತ್ತು ಎಂದು ಉಮೇಶ್ ಕತ್ತಿ ಆಗ್ರಹಿಸಿದರು.
ಅಣ್ಣಾ ಸಾಹೇಬ್ ಜೊಲ್ಲೆ ಅವರಿಗೂ ಅದಮ್ಯ ಉತ್ಸಾಹವಿದೆ. ಅಲ್ಲದೆ, ಅವರ ಪತ್ನಿ ಶಾಸಕಿ ಶಶಿಕಲಾ ಜೊಲ್ಲೆ ಮತ್ತು ಅಣ್ಣಾಸಾಹೇಬ್ ಜೊಲ್ಲೆ ಅವರ ಉತ್ಸಾಹವನ್ನು ನೋಡಿ ಪಕ್ಷದ ವರಿಷ್ಠರು ಅವರಿಗೆ ಟಿಕೆಟ್ ನೀಡರಬಹುದು ಎಂದು ಉಮೇಶ್ ಕತ್ತಿ ತಿಳಿಸಿದರು.