ಬಾವಿಗೆ ಬಿದ್ದು ಜಿಂಕೆಗೆ ಗಾಯ
ಹನೂರು,ಎ.15: ಸಮೀಪದ ಚಂಗವಾಡಿ ಗ್ರಾಮದ ಹೊರವಲಯದಲ್ಲಿರುವ ಜಮೀನಿನ ಬಾವಿಗೆ ಜಿಂಕೆಯೊಂದು ಬಿದ್ದು ಗಾಯಗೊಂಡಿರುವ ಘಟನೆ ನಡೆದಿದೆ.
ಚಂಗವಾಡಿ ಗ್ರಾಮ ಸಮೀಪದ ಅರಣ್ಯ ಪ್ರದೇಶದಿಂದ ಜಿಂಕೆಯೊಂದು ಆಹಾರ ಹುಡುಕಿ ಗ್ರಾಮಕ್ಕೆ ರವಿವಾರ ಸಂಜೆ ಆಗಮಿಸಿತ್ತು. ಈ ವೇಳೆ ರಾಜೋಜಿರಾವ್ ಅವರ ಜಮೀನಿನ 60 ಅಡಿ ಆಳವಿರುವ ಬಾವಿಗೆ ಬಿದ್ದಿತ್ತು. ಸೋಮವಾರ ಜಮೀನಿನ ಮಾಲಕರ ಪುತ್ರ ಅರುಣ್ ಅವರು ಬಾವಿಯನ್ನು ಗಮನಿಸಿದಾಗ ಜಿಂಕೆ ಇರುವುದು ಗಮನಕ್ಕೆ ಬಂದಿದೆ. ಕೂಡಲೇ ಅಗ್ನಿಶಾಮಕ ಠಾಣೆಗೆ ಪೋನ್ ಮಾಡಿ ವಿಚಾರ ತಿಳಿಸಿದ್ದು, ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಸಿಬ್ಬಂದಿಗಳು ಜಿಂಕೆಯನ್ನು ರಕ್ಷಿಸಿ ಅರಣ್ಯ ಇಲಾಖೆಗೆ ಒಪ್ಪಿಸಿದರು.
ಜಿಂಕೆಯನ್ನು ವಶಕ್ಕೆ ಪಡೆದ ಅರಣ್ಯಾಧಿಕಾರಿ ವೈದ್ಯರಿಂದ ಸೂಕ್ತ ಚಿಕಿತ್ಸೆ ಕೊಡಿಸಿ ಹಾರೈಕೆ ಮಾಡುತ್ತಿದ್ದಾರೆ. ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣೆಯ ಅಧಿಕಾರಿ ಶೇಷ, ಸಿಬ್ಬಂದಿಗಳಾದ ಶೇಖರ್, ಕೃಷ್ಣಮೂರ್ತಿ, ನಾಗೇಶ್, ಜಯಶಂಕರ್ ಪಾಲ್ಗೊಂಡಿದ್ದರು.
Next Story