ಗೋಡೆ ಬರಹದ ಮೂಲಕ ಮತದಾನ ಜಾಗೃತಿ ಮೂಡಿಸುತ್ತಿರುವ ಭದ್ರಾವತಿಯ ಕಲಾವಿದ
ಶಿವಮೊಗ್ಗ, ಏ. 15: ಪ್ರಸ್ತುತ ಕಡ್ಡಾಯ ಮತದಾನದ ಕುರಿತಂತೆ ಜಿಲ್ಲಾಡಳಿತ ವ್ಯಾಪಕ ಜನಜಾಗೃತಿ ನಡೆಸುತ್ತಿದೆ. ಸ್ವತಃ ಜಿಲ್ಲಾಧಿಕಾರಿಗಳೇ ಮನೆ ಮನೆಗೆ ತೆರಳಿ ಮತದಾನ ಕಾರ್ಯದಲ್ಲಿ ಭಾಗಿಯಾಗುವಂತೆ ಮನವಿ ಮಾಡುತ್ತಿದ್ದಾರೆ. ಡಿ.ಸಿ.ಯವರ ಈ ಕ್ರಮದಿಂದ ಪ್ರೇರೇಪಿತರಾದ ಭದ್ರಾವತಿಯ ಚಿತ್ರ ಕಲಾವಿದರೋರ್ವರು, ಗೋಡೆ ಬರಹದ ಮೂಲಕ ಮತದಾನದ ಜಾಗೃತಿ ನಡೆಸುವ ಮೂಲಕ ಗಮನ ಸೆಳೆದಿದ್ದಾರೆ.
ಭದ್ರಾವತಿ ಪಟ್ಟಣದ ಪೇಪರ್ ಟೌನ್ ಬಡಾವಣೆಯ ಗುರು ಭದ್ರಾವತಿಯವರೇ, ಗೋಡೆ ಬರಹದ ಮೂಲಕ ಮತ ಜಾಗೃತಿ ಮೂಡಿಸುತ್ತಿರುವ ಚಿತ್ರ ಕಲಾವಿದರಾಗಿದ್ದಾರೆ. ಕಳೆದ ಸುಮಾರು ನಾಲ್ಕೈದು ದಿನಗಳಿಂದ ಇವರು ಭದ್ರಾವತಿ ತಾಲೂಕಿನ 40 ಕ್ಕೂ ಅಧಿಕ ಗ್ರಾಮಗಳಲ್ಲಿ ಗೋಡೆ ಬರಹದ ಮೂಲಕ ಮತ ಜಾಗೃತಿ ಅಭಿಯಾನ ನಡೆಸುತ್ತಿದ್ದಾರೆ.
'ಶಿವಮೊಗ್ಗ ಜಿಲ್ಲಾಧಿಕಾರಿ ಕೆ.ಎ.ದಯಾನಂದ್ರವರು ಮತದಾನ ಜಾಗೃತಿಗೆ ಸಂಬಂಧಿಸಿದಂತೆ, ನಾಗರಿಕರ ಮನೆ ಮನೆಗೆ ತೆರಳಿ ಅರಿವು ಮೂಡಿಸುವ ಕಾರ್ಯ ನಡೆಸುತ್ತಿದ್ದಾರೆ. ಮತದಾನದಲ್ಲಿ ಜಿಲ್ಲೆಯು ಇಡೀ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯಬೇಕೆಂಬ ಸದುದ್ದೇಶ ಅವರದ್ದಾಗಿದೆ. ಡಿ.ಸಿ.ಯವರ ಈ ಕ್ರಮವು ತಮ್ಮ ಗಮನ ಸೆಳೆಯಿತು. ಅವರ ಈ ಕಾರ್ಯಕ್ಕೆ ಬೆಂಬಲವಾಗಿ ತಾವು ಕೂಡ ಏನಾದರೂ ಜಾಗೃತಿ ಅಭಿಯಾನ ನಡೆಸಬೇಕೆಂಬ ಮಹಾದಾಸೆ ಉಂಟಾಯಿತು. ಅದರಂತೆ ತಮ್ಮ ಸ್ನೇಹಿತ ಕರೀಗೌಡರವರ ಜೊತೆಗೂಡಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮತದಾನದ ಮಹತ್ವದ ಕುರಿತಾದ ಘೋಷಣೆಗಳನ್ನು ಗೋಡೆಗಳ ಮೇಲೆ ಬರೆಯುತ್ತಿದ್ದೆನೆ. ಸುಮಾರು 100 ಕ್ಕೂ ಅಧಿಕ ಗೋಡೆ ಬರಹಗಳನ್ನು ಬರೆದಿದ್ದು, ನಾಗರಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಗುರು ಭದ್ರಾವತಿಯವರು ಮಾಹಿತಿ ನೀಡಿದ್ದಾರೆ.
ಬಸ್ ನಿಲ್ದಾಣ ಮತ್ತಿತರ ಸಾರ್ವಜನಿಕ ಕಟ್ಟಡಗಳ ಮೇಲೆ ಈ ಘೋಷಣೆಗಳನ್ನು ಬರೆಯುತ್ತಿದ್ದೇನೆ. ಈ ವೇಳೆ ಕಟ್ಟಡಗಳ ಸೌಂದರ್ಯಕ್ಕೆ ಧಕ್ಕೆಯಾಗದಂತೆ ಎಚ್ಚರವಹಿಸುತ್ತಿದ್ದೇನೆ. ಜೊತೆಗೆ ಖಾಸಗಿ ವ್ಯಕ್ತಿಗಳಿಗೆ ಸೇರಿದ ಕಟ್ಟಡಗಳ ಮೇಲೆ ಘೋಷಣೆಗಳನ್ನು ಬರೆಯುವುದಿಲ್ಲ. ಸದರಿ ಕಟ್ಟಡದವರು ಅನುಮತಿ ನೀಡಿದರೆ ಮಾತ್ರ, ಘೋಷಣೆಗಳನ್ನು ಬರೆಯುತ್ತೇನೆ ಎಂದು ತಿಳಿಸಿದ್ದಾರೆ.
'ಮತದಾನ ಪವಿತ್ರ ಕಾರ್ಯ', 'ಮತದಾನ ಮಾಡುವವರೇ ಮಹಾಶೂರ', 'ಮತದಾನ ನಮ್ಮ ಹಕ್ಕು', 'ಕಡ್ಡಾಯವಾಗಿ ಮತ ಹಾಕಿ..' ಎಂಬಿತ್ಯಾದಿ ಘೋಷಣೆಗಳನ್ನು ಬರೆಯುತ್ತಿದ್ದೇನೆ. ತಮ್ಮ ಸ್ವಂತ ವೆಚ್ಚದಲ್ಲಿಯೇ ಇದಕ್ಕೆ ಅಗತ್ಯವಾದ ಫೈಂಟ್ ಮತ್ತೀತರ ಸಾಮಗ್ರಿಗಳನ್ನು ಖರೀದಿಸಿದ್ದೇನೆ' ಎಂದು ಇದೇ ಸಂದರ್ಭದಲ್ಲಿ ಗುರು ಭದ್ರಾವತಿರವರು ಮಾಹಿತಿ ನೀಡುತ್ತಾರೆ.
ಲಿಮ್ಕಾ ದಾಖಲೆಗೆ ಸೇರಿದ್ದ ಬ್ಯಾನರ್
2006 ರಲ್ಲಿ ಶಿವಮೊಗ್ಗ ನಗರದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ವೇಳೆ ಎನ್ಇಎಸ್ ಮೈದಾನ ಆವರಣದಲ್ಲಿ ಕನ್ನಡ ನಾಡು-ನುಡಿಗೆ ಸಂಬಂಧಿಸಿದ ಬರಹ-ಚಿತ್ರವಿದ್ದ 400 ಅಡಿ ಉದ್ದದ ಬ್ಯಾನರ್ ಅನ್ನು ತಾನು ಹಾಕಿದ್ದೆ. 2008 ರಲ್ಲಿ ಈ ಬ್ಯಾನರ್ ಲಿಮ್ಕಾ ದಾಖಲೆಗೆ ಸೇರ್ಪಡೆಯಾಗಿತ್ತು. ಅತೀ ಉದ್ದವಾದ ಬ್ಯಾನರ್ ಎಂಬ ಖ್ಯಾತಿಗೆ ಪಾತ್ರವಾಗಿತ್ತು' ಎಂದು ಗುರು ಭದ್ರಾವತಿಯವರು ಮಾಹಿತಿ ನೀಡುತ್ತಾರೆ.