ಜಗದೀಶ್ ಶೆಟ್ಟರ್ ‘ಟೈಮ್ ಬಾಂಬ್ ನಿಪುಣ’: ಸಿದ್ದರಾಮಯ್ಯ
ಬೆಂಗಳೂರು, ಮೇ 15: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಪತನಕ್ಕೆ ಸಿದ್ದರಾಮಯ್ಯ ಟೈಮ್ ಬಾಂಬ್ ಫಿಕ್ಸ್ ಮಾಡಿದ್ದಾರೆ ಎಂದು ಆರೋಪಿಸಿರುವ ಬಿಜೆಪಿ ನಾಯಕ ಜಗದೀಶ್ ಶೆಟ್ಟರ್ಗೆ ಟ್ವಿಟರ್ನಲ್ಲಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಂದಾಗಿ ಪಕ್ಷದೊಳಗೆ ಮೂಲೆ ಗುಂಪಾಗಿರುವ ‘ಟೈಮ್ ಬಾಂಬ್ ನಿಪುಣ’ ಜಗದೀಶ್ ಶೆಟ್ಟರ್ ಅವರು, ತನ್ನ ರಾಜಕೀಯ ಅಸ್ತಿತ್ವ ತೋರಿಸಿಕೊಳ್ಳಲು ಆಗಾಗ ಇಂತಹ ಜೋಕುಗಳನ್ನು ಮಾಡ್ತಾ ಇರ್ತಾರೆ. ಅವರನ್ನು ಪಕ್ಷದ ಒಳಗೆ-ಹೊರಗೆ ಯಾರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎನ್ನುವುದೇ ಅವರ ಕೊರಗು ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.
ಜಗದೀಶ್ ಶೆಟ್ಟರ್ ಒಬ್ಬ ‘ಟೈಮ್ ಬಾಂಬ್ ನಿಪುಣ’. ಪಕ್ಷದೊಳಗಿನ ತನ್ನ ರಾಜಕೀಯ ವಿರೋಧಿ ಬಿ.ಎಸ್.ಯಡಿಯೂರಪ್ಪನವರಿಗೆ ಅವರು ಇಡ್ತಾ ಇರುವ ಟೈಮ್ ಬಾಂಬ್ಗಳೆಲ್ಲ ಠುಸ್ ಆಗ್ತಾ ಇರೋದಕ್ಕೆ ಅವರು ಹತಾಶರಾಗಿದ್ದಾರೆ. ಅವರಿಗೆ ಸರಿಯಾಗಿ ಒಂದು ವರ್ಷ ಮುಖ್ಯಮಂತ್ರಿಯಾಗಲು ಯಡಿಯೂರಪ್ಪ ಬಿಟ್ಟಿಲ್ಲ. ಪಾಪ ಅವರ ಬಗ್ಗೆ ನನಗೆ ಅನುಕಂಪ ಇದೆ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.