ಐಎಂಎಗೂ ಪಿಎಫ್ಐಗೂ ಸಂಬಂಧವಿದೆ ಎಂಬ ಶೋಭಾ ಹೇಳಿಕೆ ಬಾಲಿಶ: ಪಿಎಫ್ಐ
ಬೆಂಗಳೂರು, ಜೂ.15: ಸಾವಿರಾರು ಕೋಟಿ ರೂ.ಗಳು ಹಣವನ್ನು ವಂಚಿಸಿರುವ ಐಎಂಎ ವಂಚನೆ ಪ್ರಕರಣವನ್ನು ರಾಜ್ಯ ಸರಕಾರವು ಗಂಭೀರವಾಗಿ ಪರಿಗಣಿಸಿ ಬಡ ಜನರಿಗೆ ನ್ಯಾಯ ಒದಗಿಸಬೇಕು ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಆಗ್ರಹಿಸಿದೆ.
ಬಡವರ ಹಣ ಕಬಳಿಸಿ ಐಎಂಎ ಮಾಲಕ ಮನ್ಸೂರ್ ಖಾನ್ ತಲೆಮರಿಸಿಕೊಂಡ ಬಳಿಕ ಭಾರೀ ಸಂಖ್ಯೆಯಲ್ಲಿ ಜನರು ಕಂಪನಿ ಎದುರು ಜಮಾಯಿಸಿ ಪ್ರತಿಭಟನೆ ನಡೆಸಿದ್ದರಿಂದ ಸರಕಾರ ಎಚ್ಚೆತ್ತುಕೊಂಡಿದೆ. ಇಂತಹ ವಂಚನೆಯ ಜಾಲವನ್ನು ಪತ್ತೆಹಚ್ಚಿ ಮುಂಜಾಗ್ರತಾ ಕ್ರಮ ಕೈಗೊಳ್ಳುವಲ್ಲಿ ಪೊಲೀಸ್ ಇಲಾಖೆ, ಗುಪ್ತಚರ ಇಲಾಖೆ ಸಂಪೂರ್ಣವಾಗಿ ವಿಫಲವಾಗಿವೆ. ಹೀಗಾಗಿ, ಈ ಪ್ರಕರಣದ ಕುರಿತು ನಿಷ್ಪಕ್ಷವಾದ ತನಿಖೆ ನಡೆದು, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪಿಎಫ್ಐ ಆಗ್ರಹಿಸಿದೆ.
ಐಎಂಎ ವಂಚನೆ ಪ್ರಕರಣದಲ್ಲಿ ಬಡಜನರು ಸಿಲುಕಿ ತತ್ತರಿಸುತ್ತಿರುವಾಗ ಸಂಸದೆ ಶೋಭಾ ಕರಂದ್ಲಾಜೆ ಬಾಲಿಶ ಹೇಳಿಕೆಯನ್ನು ನೀಡುವ ಮೂಲಕ ಪಿಎಫ್ಐಗೆ ಕಂಪನಿಯೊಂದಿಗೆ ಸಂಬಂಧವಿದೆ ಎಂದು ಹೇಳಿಕೆ ನೀಡಿರುವುದು ಸರಿಯಲ್ಲ ಎಂದು ಆಪಾದಿಸಿರುವ ಪಿಎಫ್ಐ, ಈ ಸಂಬಂಧ ಶೋಭಾ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ಕುರಿತು ಅವರ ವಿರುದ್ಧ ಸಂಘಟನೆಯು ಮಾನನಷ್ಟ ಮೊಕದ್ದಮೆ ದಾಖಲಿಸಲಾಗುವುದು ಎಂದು ಪಿಎಫ್ಐ ಪ್ರಧಾನ ಕಾರ್ಯದರ್ಶಿ ನಾಸಿರ್ ಪಾಶ ಹೇಳಿದ್ದಾರೆ.