ವಿಶ್ವಾಸಮತದಲ್ಲಿ ಗೆದ್ದೇ ಗೆಲ್ಲುತ್ತೇವೆ: ಈಶ್ವರ್ ಖಂಡ್ರೆ
ಬೆಂಗಳೂರು, ಜು.15: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕಾಂಗ್ರೆಸ್ ಶಾಸಕರು ಪುನಃ ಪಕ್ಷಕ್ಕೆ ಹಿಂದಿರುಗಲಿದ್ದು, ವಿಶ್ವಾಸ ಮತಯಾಚನೆಯಲ್ಲಿ ಗೆದ್ದೇ ಗೆಲ್ಲುತ್ತೇವೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂಬೈನಲ್ಲಿರುವ ಕಾಂಗ್ರೆಸ್ ಅತೃಪ್ತ ಶಾಸಕರು ಕಾಂಗ್ರೆಸ್ ತೆಕ್ಕೆಗೆ ಸೇರಿಕೊಳ್ಳುತ್ತಾರೆ. ಗುರುವಾರ ನಡೆಯುವ ವಿಶ್ವಾಸ ಮತದಲ್ಲಿ ಜಯ ನಮ್ಮದಾಗಲಿದೆ. ಹೀಗಾಗಿ ಮೈತ್ರಿ ಸರಕಾರದ ಯಾವ ಶಾಸಕರಿಗೂ ಆತಂಕವಿಲ್ಲ ಎಂದರು.
ಹಿರಿಯ ನಾಯಕ ರಾಮಲಿಂಗಾರೆಡ್ಡಿ ಸುಮಾರು 40 ವರ್ಷ ಕಾಂಗ್ರೆಸ್ ಏಳ್ಗೆಗಾಗಿ ಶ್ರಮಿಸಿದ್ದಾರೆ. ಅವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ಕಾರ್ಯನಿರ್ವಹಿಸುತ್ತಿದ್ದೇವೆ. ಹೀಗಾಗಿ ಅವರ ಕಾಂಗ್ರೆಸ್ ಬಿಡುವ ಮಾತೇ ಇಲ್ಲ. ಗುರುವಾರದವರೆಗೆ ಕಾದು ನೋಡಿ ಎಂದು ಅವರು ಹೇಳಿದರು.
ಗೃಹ ಸಚಿವ ಎಂ.ಬಿ.ಪಾಟೀಲ್ ಮಾತನಾಡಿ, ಗುರುವಾರ ವಿಶ್ವಾಸಮತ ಯಾಚನೆ ಕುರಿತು ನಾವು ಖುಷಿಯಲ್ಲೇ ಇದ್ದೇವೆ. ಇದರಲ್ಲಿ ನಾವು ಗೆಲುವು ಸಾಧಿಸಲಿದ್ದೇವೆಂಬ ವಿಶ್ವಾಸವಿದೆ. ಹೀಗಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ನಮಗ್ಯಾರಿಗೂ ಯಾವುದೆ ಆತಂಕವಿಲ್ಲವೆಂದು ತಿಳಿಸಿದರು.