ಎಪಿಸಿಆರ್ ನೂತನ ಅಧ್ಯಕ್ಷರಾಗಿ ನ್ಯಾಯವಾದಿ ಉಸ್ಮಾನ್ ಪಿ. ಆಯ್ಕೆ
ಬೆಂಗಳೂರು, ಆ.16: ಅಸೋಸಿಯೇಶನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್(ಎಪಿಸಿಆರ್) ನಾಗರೀಕ ಹಕ್ಕು ಸಂರಕ್ಷಣ ಸಂಸ್ಥೆ ಕರ್ನಾಟಕ ಘಟಕದ ನೂತನ ರಾಜ್ಯಾಧ್ಯಕ್ಷರಾಗಿ ಹೈಕೋರ್ಟ್ ಹಿರಿಯ ನ್ಯಾಯವಾದಿ ಉಸ್ಮಾನ್ ಪಿ. ಆಯ್ಕೆಯಾಗಿದ್ದು, ಕಾರ್ಯದರ್ಶಿಯಾಗಿ ಹೈಕೋರ್ಟ್ನ ಹಿರಿಯ ನ್ಯಾಯವಾದಿ ಮುಹಮ್ಮದ್ ನಿಯಾಝ್ ಪುನರಾಯ್ಕೆಗೊಂಡಿದ್ದಾರೆ.
ಗುರುವಾರ ಬೆಂಗಳೂರಿನ ಎಪಿಸಿಆರ್ ಕಚೇರಿಯಲ್ಲಿ ಮೇಲ್ವಿಚಾರಕ ಹಾಗೂ ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕದ ಉಪಾಧ್ಯಕ್ಷ ಮೌಲಾನ ಮುಹಮ್ಮದ್ ಯೂಸೂಫ್ ಕನ್ನಿ ಯವರ ಅಧ್ಯಕ್ಷತೆಯಲ್ಲಿ ಜರಗಿದ ಆಯ್ಕೆ ಪ್ರಕ್ರಿಯೆಯಲ್ಲಿ ಪದಾಧಿಕಾರಿಗಳ ಆಯ್ಕೆ ನಡೆಯಿತು.
ರಾಜ್ಯ ಸಂಯೋಜಕರಾಗಿ ಖ್ಯಾತ ಆರ್.ಟಿ.ಐ ಕಾರ್ಯಕರ್ತ ಹಾಗೂ ಎಪಿಸಿಆರ್ ಕಾರ್ಯಕರ್ತ ಶೇಖ್ ಮುಹಮ್ಮದ್ ಶಫಿ, ಖಜಾಂಚಿಯಾಗಿ ಹೈಕೋರ್ಟ್ ಹಿರಿಯ ನ್ಯಾಯಾವಾದಿ ಅಬ್ದುಸ್ಸಲಾಂ ಎನ್., ಮಾಧ್ಯಮ ಕಾರ್ಯದರ್ಶಿಯಾಗಿ ಇನಾಯತುಲ್ಲಾ ಗವಾಯಿ ಪುನರಾಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಯೂಸೂಫ್ ಕನ್ನಿ, ಎಪಿಸಿಆರ್ ಕರ್ನಾಟಕ ರಾಜ್ಯದಲ್ಲಿ ಹಲವು ಮಹತ್ತರ ಸೇವೆಗಳನ್ನು ಸಲ್ಲಿಸಿದೆ. ಧ್ವನಿ ಇಲ್ಲದವರಿಗೆ ಧ್ವನಿಯಾಗಿ 2008 ರಿಂದ ಅದು ಕಾರ್ಯನಿರ್ವಹಿಸುತ್ತಿದೆ. ದಮನಿತರ, ಶೋಷಿತರ ಪರವಾಗಿ ಹಕ್ಕುಗಳ ಉಲ್ಲಂಘನೆಯಾದಲ್ಲಿ ಜನರ ಹಕ್ಕುಗಳನ್ನು ಅವರಿಗೆ ದೊರಕಿಸಿ ಕೊಡುವಂತಹ ಕೆಲಸ ಮಾಡುತ್ತಾ ಬಂದಿದೆ. ರಾಜ್ಯದ 28 ಜಿಲ್ಲೆಗಳಲ್ಲಿ ಇದು ಸಕ್ರೀಯವಾಗಿದ್ದು 400 ಕ್ಕೂ ಅಧಿಕ ಸದಸ್ಯರನ್ನು ಹೊಂದಿದೆ ಎಂದರು.
ನೂತನ ಕಾರ್ಯದರ್ಶಿ ನಿಯಾಝ್ ಆಹ್ಮದ್ ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ನೂತನವಾಗಿ ಆಯ್ಕೆಗೊಂಡ ಪದಾಧಿಕಾರಿಗಳು ತಮ್ಮ ಪರಿಚಯವನ್ನು ಮಾಡಿದರು. ರಾಜ್ಯ ಸಮಿತಿ ಸದಸ್ಯರಾದ ನ್ಯಾಯಾವಾದಿ ನಾಗೆಗೌಡ ಮೈಸೂರು, ತಾಜುದ್ದೀನ್ ತುಮಕೂರು, ಮುಹಮ್ಮದ್ ಫಝಲ್ ಬೆಂಗಳೂರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.