ಬ್ಯಾಂಕ್ ಅಧಿಕಾರಿ ಎಂದು ನಂಬಿಸಿ ಸಾವಿರಾರು ರೂ. ಲಪಟಾಯಿಸಿದ ವಂಚಕ
ದೂರು ದಾಖಲು
ಸಾಂದರ್ಭಿಕ ಚಿತ್ರ
ಶಿವಮೊಗ್ಗ, ಆ. 21: ಬ್ಯಾಂಕ್ ಅಧಿಕಾರಿ ಎಂದು ಗ್ರಾಮಸ್ಥರೋರ್ವರ ಮೊಬೈಲ್ಗೆ ಕರೆ ಮಾಡಿದ ವಂಚಕನೋರ್ವ, ಎಟಿಎಂ ಕಾರ್ಡ್ ಬ್ಲಾಕ್ ಆಗಿದ್ದು ಸಕ್ರಿಯಗೊಳಿಸಿ ಕೊಡುವುದಾಗಿ ಹೇಳಿ ಆನ್ಲೈನ್ ಮೂಲಕ ಅವರ ಬ್ಯಾಂಕ್ ಖಾತೆಯಿಂದ ಸಾವಿರಾರು ಲಪಟಾಯಿಸಿರುವ ಸಂಬಂಧ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭದ್ರಾವತಿ ತಾಲೂಕು ಕಲ್ಪನಹಳ್ಳಿ ಗ್ರಾಮದ ನಿವಾಸಿ, ದೂರುದಾರ ಹಾಲೇಶ್ವರ ನಾಯ್ಕ್ ವಂಚನೆಗೊಳಗಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಭದ್ರಾವತಿ ಸ್ಟೇಟ್ ಬ್ಯಾಂಕ್ ಇಂಡಿಯಾ ಬ್ಯಾಂಕ್ನಲ್ಲಿ ದೂರುದಾರನ ಎಸ್.ಬಿ. ಖಾತೆಯಿಂದ 10,105 ರೂ.ಗಳನ್ನು ವಂಚಕ ಡ್ರಾ ಮಾಡಿ ಮೋಸ ಮಾಡಿದ್ದಾನೆ.
ಘಟನೆ ಹಿನ್ನೆಲೆ: ಇತ್ತೀಚೆಗೆ ಬ್ಯಾಂಕ್ ಅಧಿಕಾರಿ ಎಂದು ಹೇಳಿ ವಂಚಕ ದೂರುದಾರರ ಮೊಬೈಲ್ಗೆ ಕರೆ ಮಾಡಿದ್ದ. ನಿಮ್ಮ ಎಟಿಎಂ ಕಾರ್ಡ್ ಬ್ಲಾಕ್ ಆಗಿದ್ದು, ಸಕ್ರಿಯಗೊಳಿಸಿ ಕೊಡುವುದಾಗಿ ಹೇಳಿದ್ದ. ಆರೋಪಿಯ ಮಾತನ್ನು ನಂಬಿ ಎಟಿಎಂ ಕಾರ್ಡ್ ಮೇಲಿನ ಸಂಖ್ಯೆಗಳನ್ನು ಹಾಗೂ ಮೊಬೈಲ್ಗೆ ಬಂದ ಓಟಿಪಿ ನಂಬರ್ ವಿವರ ತಿಳಿಸಿದ್ದರು. ಇದಾದ ನಂತರ ಅವರ ಬ್ಯಾಂಕ್ ಖಾತೆಯಿಂದ ಆರೋಪಿ ಹಣ ಡ್ರಾ ಮಾಡಿಕೊಂಡು ವಂಚಿಸಿದ್ದಾನೆ ಎಂದು ತಿಳಿದುಬಂದಿದೆ.