ಕೋರ್ಟ್ ತೀರ್ಪಿಗೆ ಹೆದರಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿ
ಶಿವಮೊಗ್ಗ, ಆ. 21: ಜಮೀನು ವ್ಯಾಜ್ಯಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ವ್ಯಾಜ್ಯದ ತೀರ್ಪು ಎಲ್ಲಿ ತಮ್ಮ ವಿರುದ್ದವಾಗಿ ಬಂದು, ಜಮೀನು ತಮ್ಮ ಕೈಬಿಟ್ಟು ಹೋಗುವುದೋ ಎಂಬ ಭಯದಿಂದ ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಭದ್ರಾವತಿ ತಾಲೂಕಿನ ಅರಳಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ಶಹಬಾಜ್ ಖಾನ್ (36) ಆತ್ಮಹತ್ಯೆಗೆ ಶರಣಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಜಮೀನು ವಿಚಾರ ಕುರಿತಂತೆ, ಇವರಿಗೂ ಹಾಗೂ ಸಹೋದರಿಯರ ವ್ಯಾಜ್ಯ ನ್ಯಾಯಾಲಯದಲ್ಲಿತ್ತು. ನ್ಯಾಯಾಲಯದ ತೀರ್ಪು ಅಕ್ಕಂದಿರ ಪರವಾಗಿ ಬರುತ್ತದೆಯೋ ಹಾಗೂ ಎಲ್ಲಿ ತಮ್ಮಿಂದ ಆಸ್ತಿ ಕೈಬಿಟ್ಟು ಹೋಗಲಿದೆಯೋ ಎಂಬ ಆತಂಕದಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಮೃತ ಶಹಬಾಜ್ ಖಾನ್ರವರ ಪತ್ನಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story