ಚಿಕ್ಕಮಗಳೂರು: ಪ್ರೀತಿ ನಿರಾಕರಿಸಿದ ಯುವತಿಗೆ ಚೂರಿ ಇರಿದ ಯುವಕ
ಆರೋಪಿ ಮಿಥುನ್
ಚಿಕ್ಕಮಗಳೂರು, ಸೆ.18: ಪ್ರೀತಿಯನ್ನು ನಿರಾಕರಿಸದಳೆಂಬ ಕಾರಣಕ್ಕೆ ಯುವಕನೊಬ್ಬ ಯುವತಿಯನ್ನು ನದಿಗೆ ತಳ್ಳಿದ್ದಲ್ಲದೇ ಯುವತಿಗೆ ಮನಬಂದಂತೆ ಚೂರಿಯಿಂದ ತಿವಿದು ಕೊಲೆ ಮಾಡಲು ಯತ್ನಿಸಿದ ಘಟನೆ ಬಾಳೆಹೊನ್ನೂರು ಹೋಬಳಿ ವ್ಯಾಪ್ತಿಯ ಮಹಲ್ಗೋಡು ಗ್ರಾಮದಲ್ಲಿ ಬುಧವಾರ ಮದ್ಯಾಹ್ನ ವರದಿಯಾಗಿದೆ.
ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಬಾಳೆಹೊನ್ನೂರು ಪಟ್ಟಣ ಸಮೀಪದ ಗಡಿಗೇಶ್ವರ ನಿವಾಸಿ ಮಿಥುನ್ ಯುವತಿಯ ಹತ್ಯೆಗೆ ಯತ್ನಿಸಿದ ಆರೋಪಿಯಾಗಿದ್ದು, ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಯುವತಿಯನ್ನು ಹಾಸನ ನಗರದ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ.
ಗುರುವಾರ ಮಿಥುನ್ ಹಾಗೂ ಯುವತಿ ಬೈಕ್ನಲ್ಲಿ ಕಳಸ, ಹೊರನಾಡು ಸುತ್ತಮುತ್ತಲಿನ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಗೆ ಬಂದಿದ್ದು, ನಂತರ ಬಾಳೆಹೊನ್ನೂರು ಹೋಬಳಿ ವ್ಯಾಪ್ತಿಯ ಮಾಗುಂಡಿ ಗ್ರಾಮ ಸಮೀಪದಲ್ಲಿರುವ ಮಹಲ್ಗೋಡು ಎಂಬಲ್ಲಿ ಹರಿಯುವ ಭದ್ರಾ ನದಿಯ ತೀರಕ್ಕೆ ಹೋಗಿದ್ದಾರೆ. ಈ ವೇಳೆ ಯುವತಿಯು ತನ್ನ ಹಳೆಯ ಪ್ರೇಮಿಯ ವಿಚಾರವನ್ನು ಪ್ರಸ್ತಾಪಿಸಿ ಮಿಥುನ್ನ ಪ್ರೀತಿಯನ್ನು ನಿರಾಕರಿಸಿದ್ದಾಳೆ. ಇದರಿಂದ ಕುಪಿತಗೊಂಡ ಮಿಥುನ್ ಯುವತಿಯನ್ನು ಭದ್ರಾ ನದಿಗೆ ತಳ್ಳಿದ್ದಾನೆ. ಆದರೆ ಯುವತಿ ನದಿಯಲ್ಲಿ ಮುಳುಗದೇ ಹೇಗೋ ಪಾರಾಗಿ ದಡಕ್ಕೆ ಬಂದಿದ್ದು, ಇದರಿಂದ ಕೆರಳಿದ ಮಿಥುನ್ ತನ್ನ ಬಳಿ ಇದ್ದ ಚೂರಿಯಿಂದ ಯುವತಿ ಬೆನ್ನು, ಕುತ್ತಿಗೆ, ತಲೆ ಹಾಗೂ ಬೆನ್ನಿನ ಭಾಗಕ್ಕೆ ಇರಿದಿದ್ದಾನೆಂದು ತಿಳಿದು ಬಂದಿದೆ.
ಯುವತಿಯ ಕೂಗಾಟ ಕೇಳಿಸಿಕೊಂಡ ಸ್ಥಳೀಯರು ಸ್ಥಳಕ್ಕೆ ಆಗಮಮಿಸಿ ರಕ್ತದ ಮಡುವಿನಲ್ಲಿ ಬಿದ್ದದ್ದ ಯುವತಿಯನ್ನು ಬಾಳೆಹೊನ್ನೂರಿಗೆ ಕರೆತಂದಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಯುವತಿಯನ್ನು ಹಾಸನಕ್ಕೆ ಕೊಂಡೊಯ್ಯಲಾಗಿದೆ ಎಂದು ತಿಳಿದು ಬಂದಿದೆ. ಘಟನೆ ಬಳಿಕ ಮಿಥುನ್ ಪರಾರಿಯಾಗಿ ತಲೆ ಮರೆಸಿಕೊಂಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಬಾಳೆಹೊನ್ನೂರು ಪೊಲೀಸರು ಆರೋಪಿಯ ಪತ್ತೆಗಾಗಿ ತನಿಖೆ ಆರಂಭಿಸಿದ್ದಾರೆ. ಘಟನೆ ಬಗ್ಗೆ ಹೆಚ್ಚಿನ ಮಾಹಿತಿ ತನಿಖೆಯಿಂದ ತಿಳಿದು ಬರಬೇಕಿದೆ.