ಶಾಸಕ ಅಪ್ಪಚ್ಚು ರಂಜನ್ ಮನೆ ಆವರಣದಿಂದ ಗಂಧದ ಮರ ಕಳವು
ಮಡಿಕೇರಿ, ಅ.11 : ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅವರ ಮನೆಯ ಆವರಣದಲ್ಲಿ ಬೆಳೆಯಲಾಗಿದ್ದ ಬೆಲೆ ಬಾಳುವ ಶ್ರೀಗಂಧದ ಮರವೊಂದನ್ನು ಕಳ್ಳರು ಕದ್ದೊಯ್ದಿದ್ದಾರೆ.
ಪ್ರಕರಣದ ಕುರಿತು ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಸೋಮವಾರಪೇಟೆ ವಲಯ ಅರಣ್ಯ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಕೈಗೊಂಡಿದ್ದಾರೆ.
ಮಡಿಕೇರಿ ಕ್ಷೇತ್ರ ಶಾಸಕ ಅಪ್ಪಚ್ಚು ರಂಜನ್ ಅವರಿಗೆ ಸೋಮವಾರಪೇಟೆ ತಾಲೂಕಿನ ಕುಂಬೂರಿನಲ್ಲಿ ಸ್ವಂತ ಮನೆ ಇದೆ. ಮನೆಯನ್ನು ಪ್ರವೇಶಿಸುವ ಗೇಟಿನ ಪಕ್ಕದಲ್ಲಿ ಅಂದಾಜು 1 ಲಕ್ಷ ರೂಪಾಯಿಗೂ ಅಧಿಕ ಬೆಲೆ ಬಾಳುವ ಮರವನ್ನು ಹಲವು ವರ್ಷಗಳಿಂದ ಬೆಳೆಸಲಾಗಿತ್ತು. ಅ.10 ರಂದು ಶಾಸಕರ ಮನೆಯಲ್ಲಿ ಯಾರು ಇಲ್ಲದಿರುವುದನ್ನು ಅರಿತುಕೊಂಡ ಕಳ್ಳರು ರಾತ್ರಿ ಶ್ರೀಗಂಧದ ಮರವನ್ನು ಮರ ಕಡಿಯುವ ಯಂತ್ರದಿಂದ ಕತ್ತರಿಸಿ ಸ್ಥಳದಿಂದ ಹೊತ್ತೊಯ್ದಿದ್ದಾರೆ. ಇಂದು ಬೆಳಗೆ ತೋಟದ ಕೆಲಸದವರು ಬಂದಾಗ ಶ್ರೀಗಂಧದ ಮರ ಕಳವಾಗಿರುವುದು ಬೆಳಕಿಗೆ ಬಂದಿದೆ.
Next Story