ರಾಹುಲ್ ಗಾಂಧಿಯ 'ಅತ್ಯಾಚಾರಗಳ ರಾಜಧಾನಿ' ಹೇಳಿಕೆಗೆ ಡಿಸಿಎಂ ಸವದಿ ಖಂಡನೆ
ಬೆಂಗಳೂರು, ಡಿ.8: ಭಾರತವು ಅತ್ಯಾಚಾರಗಳ ರಾಜಧಾನಿ ಆಗುತ್ತಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಹೇಳಿರುವುದು ತೀರಾ ಖಂಡನೀಯ. ರಾಹುಲ್ ಗಾಂಧಿ ಕಾಂಗ್ರೆಸ್ ನಂತಹ ಹಿರಿಯ ಪಕ್ಷದ ಮುಖಂಡರಾಗಿದ್ದಾರೆ. ಅವರು ತಮ್ಮ ಜವಾಬ್ದಾರಿಯನ್ನು ಅರಿತು ಮಾತನಾಡಬೇಕಿತ್ತು ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.
ಈ ರೀತಿ ಬೇಜವಾಬ್ದಾರಿಯಿಂದ ಮಾತನಾಡಿದರೆ ಅಂತರಾಷ್ಟ್ರೀಯ ಮಟ್ಟದಲ್ಲಿ ನಮ್ಮ ರಾಷ್ಟ್ರದ ಗೌರವ ಮಣ್ಣುಪಾಲಾಗುತ್ತದೆ ಎಂಬ ಕನಿಷ್ಠ ತಿಳುವಳಿಕೆ ಅವರಿಗೆ ಇಲ್ಲದಿರುವುದು ದುರ್ದೈವದ ಸಂಗತಿ. ಅತ್ಯಾಚಾರ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ, ಮುಂತಾದ ಸಾಮಾಜಿಕ ಪಿಡುಗುಗಳನ್ನು ಮಟ್ಟಹಾಕಲು ಎಲ್ಲಾ ಪಕ್ಷಗಳು ಸಂಘಟಿತವಾಗಿ ಹೋರಾಡುವುದು ಅಗತ್ಯವಾಗಿದೆ. ಅದನ್ನು ಬಿಟ್ಟು ಈ ರೀತಿ ರಾಜಕೀಯ ಪ್ರೇರಿತ ಹೇಳಿಕೆ ನೀಡುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಈ ರೀತಿಯ ಸಮಸ್ಯೆಗಳಿದ್ದಾಗ ಪ್ರಚೋದನಕಾರಿ ಹೇಳಿಕೆ ನೀಡುವುದರಿಂದ ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತದೆಯೇ ವಿನಹ ಪರಿಹಾರವಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಮೋದಿ ಹಿಂಸಾಚಾರದಲ್ಲಿ ನಂಬಿಕೆ ಹೊಂದಿದ್ದಾರೆ ಎಂಬ ರಾಹುಲ್ ಗಾಂಧಿಯವರ ಹೇಳಿಕೆಯನ್ನು ನಾನು ಕಟುವಾಗಿ ಖಂಡಿಸುತ್ತೇನೆ. ಹಿಂದೆ ದೆಹಲಿಯಲ್ಲಿ ಸಿಕ್ಖ್ ಜನಾಂಗದ ಮೇಲೆ ಅಮಾನುಷವಾಗಿ ಹಿಂಸಾಚಾರ ನಡೆಸಿದ್ದು ಯಾರು ಎಂಬುದನ್ನು ರಾಹುಲ್ ಗಾಂಧಿಯವರು ನೆನಪಿಸಿಕೊಂಡರೆ ಹಿಂಸಾವಾದಿಗಳು ಯಾರು ಎಂಬ ಸತ್ಯ ಬಯಲಾಗುತ್ತದೆ ಎಂದು ಅವರು ಟೀಕಿಸಿದ್ದಾರೆ.