ಗೌರಿ ಹತ್ಯೆ ಪ್ರಕರಣ: ವಿಚಾರವಾದಿಗಳ ಹತ್ಯೆಗೆ ಸಂಚು ರೂಪಿಸುತ್ತಿದ್ದ 14ನೇ ಆರೋಪಿ ರಿಷಿಕೇಶ್ ?
ರಿಷಿಕೇಶ್
ಬೆಂಗಳೂರು, ಜ.12: ವಿಚಾರವಾದಿ, ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ಬಂಧಿತವಾಗಿರುವ 14ನೇ ಆರೋಪಿ ರಿಷಿಕೇಶ್, ವಿಚಾರವಾದಿಗಳನ್ನು ಹೇಗೆ ಹತ್ಯೆ ಮಾಡಬೇಕು ಎಂಬ ಸಂಚು ರೂಪಿಸಿ, ಅದಕ್ಕೆ ಸಿದ್ಧತೆಗಳನ್ನು ಮಾಡಿಕೊಡುತ್ತಿದ್ದ ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬಾಯಿಬಿಟ್ಟಿದ್ದಾನೆ ಎಂದು ಹೇಳಲಾಗುತ್ತಿದೆ.
ರಿಷಿಕೇಶ್ ಯಾನೆ ಮುರುಳಿ (44) ಅನ್ನು ಈಗಾಗಲೇ ಜಾರ್ಖಂಡ್ನಲ್ಲಿ ಬಂಧಿಸಿರುವ ಶೇಷ ತನಿಖಾ ದಳದ (ಎಸ್ಐಟಿ) ಪೊಲೀಸರು, ಈತ ವಿಚಾರವಾದಿಗಳಾದ ಗೋವಿಂದ್ ಪನ್ಸಾರೆ ಸೇರಿದಂತೆ ಮತ್ತಿತರ ಚಿಂತಕರ ಹತ್ಯೆ ಪ್ರಕರಣದಲ್ಲಿ ಪಾತ್ರವಹಿಸಿದ್ದಾನೆಯೇ ಎನ್ನುವ ಅಂಶ ಪತ್ತೆಹಚ್ಚುತ್ತಿದ್ದಾರೆ ಎನ್ನಲಾಗಿದೆ.
ಗೌರಿ ಲಂಕೇಶ್ ಹತ್ಯೆ ಪ್ರಕರಣ ರೂವಾರಿ ಎನ್ನಲಾದ ಅಮೋಲ್ ಕಾಳೆ ಬಳಗದಲ್ಲಿ ರಿಷಿಕೇಶ್ ಸಹ ಓರ್ವನಾಗಿದ್ದು, ಎಲ್ಲಿ, ಯಾವಾಗ ಹಾಗೂ ಹೇಗೆ ಹತ್ಯೆ ಮಾಡಬೇಕೆಂದು ಈತ ಸಂಚು ರೂಪಿಸುತ್ತಿದ್ದ ಎಂದು ಮೂಲಗಳು ತಿಳಿಸಿವೆ.
ಮೂಲತಃ ಮಹಾರಾಷ್ಟ್ರದ ಔರಂಗಬಾದ್ ನಿವಾಸಿ ಆಗಿರುವ ರಿಷಿಕೇಶ್ ಸಾಂಗ್ಲಿ, ಸಿಂಧೂದುರ್ಗ ಹಾಗೂ ಬೆಳಗಾವಿಗಳಲ್ಲಿ ಸಂಪರ್ಕ ಹೊಂದಿದ್ದು, ಈತನೊಂದಿಗೆ ನಂಟು ಹೊಂದಿರುವ ಯುವಕರಿಗಾಗಿಯೂ ಪೊಲೀಸರು ಶೋಧ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.