ರೆಡ್ಡಿಗಳ ತಂಟೆಗೆ ಬಂದರೆ ಪರಿಣಾಮ ನೆಟ್ಟಗಿರಲ್ಲ: ಝಮೀರ್ ಅಹ್ಮದ್ ಗೆ ಸೋಮಶೇಖರ್ ರೆಡ್ಡಿ ಎಚ್ಚರಿಕೆ
"ನಮ್ಮ ಹುಡುಗರು ದೊಣ್ಣೆಗಳನ್ನು ಹಿಡಿದು...."
ಬಳ್ಳಾರಿ, ಜ.13: ಕಾಂಗ್ರೆಸ್ ನಾಯಕ ಝಮೀರ್ ಅಹ್ಮದ್ ಖಾನ್ ಹುಚ್ಚುನಾಯಿ. ಕಚ್ಚುವುದಕ್ಕಾಗಿಯೇ ಬೆಂಗಳೂರಿನಿಂದ ಬಳ್ಳಾರಿವರೆಗೂ ಬಂದಿದೆ. ರೆಡ್ಡಿಗಳ ತಂಟೆಗೆ ಬಂದರೆ ಪರಿಣಾಮ ನೆಟ್ಟಗಿರಲ್ಲ ಎಂದು ಶಾಸಕ ಸೋಮಶೇಖರ್ ರೆಡ್ಡಿ ಎಚ್ಚರಿಕೆ ನೀಡಿದ್ದಾರೆ.
ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಹುಡುಗರು ದೊಣ್ಣೆಗಳನ್ನು ಹಿಡಿದು ಝಮೀರ್ ಅಹ್ಮದ್ ಖಾನ್ಗಾಗಿ ಕಾಯುತ್ತಿದ್ದರು. ಅವರು ನಮ್ಮ ಮನೆವರೆಗೂ ಬಂದಿದ್ದರೆ ತಕ್ಕಪಾಠ ಕಲಿಸುತ್ತಿದ್ದೆವು. ಪೊಲೀಸರು ಮಾರ್ಗಮಧ್ಯೆದಲ್ಲಿಯೇ ಅವರನ್ನು ಬಂಧಿಸಿದ್ದಾರೆಂದು ತಿಳಿಸಿದರು.
ಝಮೀರ್ ಅಹ್ಮದ್ ಖಾನ್ಗೆ ತಾಕತ್ತಿದ್ದರೆ ಒಬ್ಬನೇ ಬರಲಿ. ನಾನೊಬ್ಬನೇ ಅವನನ್ನು ಎದುರಿಸುತ್ತೇನೆ. ನಾನು ಉಫ್ ಅಂದಿದ್ದಕ್ಕೆ ಬೆಂಗಳೂರಿನಿಂದ ಬಂದು ಹಾಗೆಯೇ ಹೆಲಿಕಾಪ್ಟರ್ನಲ್ಲಿ ಹಾರಿ ಹೋಗಿದೆ. ಇಲ್ಲಿ ಆತನಿಗೆ ಯಾರು ಹೆದರುವವರಿಲ್ಲವೆಂದು ಅವರು ಕಿಡಿಕಾರಿದರು.
ನನ್ನ ವಿರುದ್ಧ ಪ್ರತಿಭಟನೆ ಮಾಡಲು ಝಮೀರ್ ಅಹ್ಮದ್ ಖಾನ್ ಒಬ್ಬರೇ ಅಲ್ಲ. ಇಡೀ ದೇಶದ ಕಾಂಗ್ರೆಸ್ ನಾಯಕರೇ ಬಳ್ಳಾರಿಗೆ ಬರಲಿ. ಅವರಿಗೆ ಪ್ರತಿಭಟನೆ ಮಾಡಲು ಅನುಕೂಲವಾಗುವಂತೆ ಶಾಮಿಯಾನ ಹಾಕಿಸುತ್ತೇನೆ. ಊಟದ ವ್ಯವಸ್ಥೆಯನ್ನು ಮಾಡಿಸುತ್ತೇನೆ. ಪ್ರತಿಭಟನೆ ಮಾಡಿ ಹಾಗೆಯೇ ತೆರಳಲಿ. ಇಂತಹ ಪ್ರತಿಭಟನೆಗೆ ನಾವು ಭಯಪಡುವವರಲ್ಲ.
-ಸೋಮಶೇಖರ್ ರೆಡ್ಡಿ, ಶಾಸಕ