ನಾಳೆಯೇ ಸಚಿವ ಸಂಪುಟ ವಿಸ್ತರಣೆ ಬಹುತೇಕ ಖಚಿತ : ಸಿಎಂ ಬಿಎಸ್ ವೈ
ಬೆಂಗಳೂರು, ಜ.30: ಕರ್ನಾಟಕ ರಾಜ್ಯ ಸಂಪುಟ ವಿಸ್ತರಣೆ ಬಹುತೇಕ ಖಚಿತವಾಗಿದ್ದು, ಗುರುವಾರ ರಾತ್ರಿ 10 ಗಂಟೆಗೆ ಸಚಿವ ಸಂಪುಟ ವಿಚಾರಕ್ಕೆ ಸಂಬಂಧಿಸಿ ಚರ್ಚಿಸಲು ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಗೃಹ ಸಚಿವ ಅಮಿತ್ ಶಾ ರನ್ನು ಭೇಟಿಯಾಗಲಿದ್ದಾರೆ.
ನಾಳೆಯೇ ಸಚಿವ ಸಂಪುಟ ವಿಸ್ತರಣೆ ಶೇ 99ರಷ್ಟು ಖಚಿತ ಎಂದು ಮುಖ್ಯ ಮಂತ್ರಿ ಬಿಎಸ್.ಎಸ್.ಯಡಿಯೂರಪ್ಪ ದಿಲ್ಲಿಗೆ ವಿಮಾನವೇರುವ ಮೊದಲು ಬೆಂಗಳೂರಿನಲ್ಲಿ ಇಂದು ಹೇಳಿಕೆ ನೀಡಿದ್ದಾರೆ.
ಗೃಹ ಸಚಿವ ಅಮಿತ್ ಶಾ ರನ್ನು ಭೇಟಿಯಾಗುದಕ್ಕೂ ಮೊದಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾರನ್ನು ಬಿಎಸ್ ವೈ ಭೇಟಿಯಾಗಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಚರ್ಚಿಸಲಿದ್ದಾರೆ. ದಿಲ್ಲಿಯ ವಿಧಾನ ಸಭಾ ಚುನಾವಣೆ ಪ್ರಚಾರದ ಕಾರಣದಿಂದಾಗಿ ಮುಖ್ಯ ಮಂತ್ರಿ ಅವರಿಗೆ ಹೈಕಮಾಂಡ್ ನ ಭೇಟಿಗೆ ರಾತ್ರಿ 9:30ರ ನಂತರ ಸಮಯ ನಿಗದಿಯಾಗಿದೆ.
ಹೈಕಮಾಂಡ್ ಭೇಟಿಯ ಬಳಿಕ ಶುಕ್ರವಾರ ಮುಖ್ಯ ಮಂತ್ರಿ ಬಿಎಸ್ ವೈ ಬೆಂಗಳೂರಿಗೆ ವಾಪಸಾಗಲಿದ್ದಾರೆ ಎಂದು ತಿಳಿದು ಬಂದಿದೆ.
ಸಚಿವ ಸಂಪುಟ ವಿಸ್ತರಣೆಗೆ ಹೈಕಮಾಂಡ್ ನ ಗ್ರೀನ್ ಸಿಗ್ನಲ್ ಸಿಕ್ಕಿರುವ ಬೆನ್ನಲ್ಲೇ ಬಿಜೆಪಿಯ ಸಚಿವ ಸ್ಥಾನದ ಆಕಾಂಕ್ಷಿಗಳು ದಿಲ್ಲಿಗೆ ದೌಡಾಯಿಸಿದ್ದಾರೆ. ಹೈಕಮಾಂಡ್ ಭೇಟಿಯಾಗಿ ಸಚಿವ ಸ್ಥಾನಕ್ಕಾಗಿ ಮನವಿ ಮಾಡುವ ಪ್ರಯತ್ನ ನಡೆಸಲಿದ್ದಾರೆ.