ಕಳ್ಳನ ಕೈಯಲ್ಲಿ, ಕೀಲಿ ಕೊಟ್ಟ ಹಾಗಾಗಿದೆ: ಸಚಿವ ಆನಂದ್ ಸಿಂಗ್ ವಿರುದ್ಧ ರೇವಣ್ಣ ವಾಗ್ದಾಳಿ
ರಾಯಚೂರು, ಫೆ.14: ಆನಂದ್ ಸಿಂಗ್ ಅವರಿಗೆ ಅರಣ್ಯ ಇಲಾಖೆ ಖಾತೆ ಸಿಕ್ಕಿದ್ದು, ಕಳ್ಳನ ಕೈಗೆ ಕೀಲಿ ಕೊಟ್ಟ ಹಾಗಿದೆ ಎಂದು ಮಾಜಿ ಸಚಿವ ಎಚ್.ಎಂ.ರೇವಣ್ಣ ವಾಗ್ದಾಳಿ ನಡೆಸಿದರು.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅರಣ್ಯ ಸಚಿವನಿಗೆ ಪರಿಜ್ಞಾನವೇ ಇಲ್ಲ. ಗಣಿ ವ್ಯವಹಾರದಲ್ಲಿ ಸ್ವಲ್ಪ ಅರಣ್ಯ ಅಸ್ತವ್ಯಸ್ತವಾಗುವುದು ಸರಿ ಎಂದು ಹೇಳುವ ಮೂಲಕ ದರೋಡೆಗೆ ಮುಂದಾಗಿದ್ದಾರೆ ಎನ್ನುವುದು ಖಚಿತವಾಗಿದೆ ಎಂದು ದೂರಿದರು.
ವಿಧಾನ ಪರಿಷತ್ ಚುನಾವಣೆಯಲ್ಲಿ ಅನಿಲ್ ಕುಮಾರ್ ಸ್ಪರ್ಧೆ ಹಿನ್ನೆಲೆ ಜೆಡಿಎಸ್ ಅವರು ಚರ್ಚಿಸಿ ಈಗ ಅಭ್ಯರ್ಥಿ ನಿಲ್ಲಿಸಿದ್ದಾರೆ. ಆದರೆ, ಈ ಬಗ್ಗೆ ನಮ್ಮಲ್ಲಿ ಚರ್ಚೆ ಆಗಿಲ್ಲ. ಎರಡೂ ಪಕ್ಷದವರು ಸೇರಿ ಅಭ್ಯರ್ಥಿ ನಿಲ್ಲಿಸಿಲ್ಲ ಎಂದು ನುಡಿದರು.
ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿ ವೇತನ ಬಿಜೆಪಿ ಸರಕಾರದಲ್ಲಿ ಸ್ಥಗಿತಗೊಂಡಿದೆ ಎಂದ ಅವರು, ಸಂಗೊಳ್ಳಿ ರಾಯಣ್ಣ ಪ್ರಾಧಿಕಾರಕ್ಕೆ ಹಣ ನೀಡುತ್ತಿಲ್ಲ ಎಂದು ರೇವಣ್ಣ ಬೇಸರ ವ್ಯಕ್ತಪಡಿಸಿದರು.
Next Story