ಕಾರು ಪಲ್ಟಿ: ಸುಂಟಿಕೊಪ್ಪದ ನಿವಾಸಿ ಮೃತ್ಯು
ಮಡಿಕೇರಿ, ಫೆ.20 : ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಬರೆಗೆ ಢಿಕ್ಕಿಯಾಗಿ ರಸ್ತೆಗುರುಳಿದ ಪರಿಣಾಮ ಕಾರು ಚಲಾಯಿಸುತ್ತಿದ್ದ ವ್ಯಕ್ತಿ ಸಾವಿಗೀಡಾಗಿರುವ ಘಟನೆ ಮಡಿಕೇರಿ- ಕುಶಾಲನಗರ ರಾಷ್ಟ್ರೀಯ ಹೆದ್ದಾರಿಯ ಸಿಂಕೋನ ಬಳಿ ನಡೆದಿದೆ.
ಕಾರಿನಲ್ಲಿದ್ದ ಮಹಿಳೆಗೆ ಗಂಭೀರ ಗಾಯಗಳಾಗಿದ್ದು, ಮೈಸೂರು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಕಾರು ಚಲಾಯಿಸುತ್ತಿದ್ದ ಸುಂಟಿಕೊಪ್ಪದ ನಿವಾಸಿ ಬಿ.ಎಸ್.ರಫೀಕ್(38) ಎಂಬವರು ಮೃತಪಟ್ಟವರು. ಅವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಹೊಸಕೋಟೆ ನಿವಾಸಿ ದಿ. ಖಾದರ್ ಅವರ ಪುತ್ರಿ ಸಫ್ರಿನಾ ಸ್ಥಿತಿ ಚಿಂತಾಜನಕವಾಗಿದೆ.
ಸುಂಟಿಕೊಪ್ಪ ನಿವಾಸಿ ಬಿ.ಎಸ್.ರಫೀಕ್ ತಮ್ಮ ಕಾರಿನಲ್ಲಿ ಸಫ್ರಿನಾ ಅವರೊಂದಿಗೆ ಮಡಿಕೇರಿಯಿಂದ ಸುಂಟಿಕೊಪ್ಪ ಕಡೆಗೆ ತೆರಳುತ್ತಿದ್ದರು. ಈ ಸಂದರ್ಭ ಸಿಂಕೋನ ಹೆದ್ದಾರಿ ಬಳಿ ಇಳಿಜಾರು ರಸ್ತೆಯಲ್ಲಿ ಕಾರು ನಿಯಂತ್ರಣ ಕಳೆದುಕೊಂಡು ಅಪಘಾತಕ್ಕೀಡಾಗಿದೆ.
ಗಾಯಾಳುಗಳನ್ನು ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತ್ತಾದರು ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದ ಕಾರಣ ಮೈಸೂರು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ರಫೀಕ್ ಮೃತಪಟ್ಟರು