ಎಚ್.ಎಸ್.ದೊರೆಸ್ವಾಮಿ ಪಾಕ್ ಏಜೆಂಟ್ ಎಂದ ಬಿಜೆಪಿ ಶಾಸಕ ಯತ್ನಾಳ್ !
'ಆ ಮುದುಕ ಎಲ್ಲಿದ್ದಾನೆ' ಎಂದು ಏಕವಚನದಲ್ಲಿ ವಾಗ್ದಾಳಿ
ವಿಜಯಪುರ, ಫೆ.25: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಪಾಕಿಸ್ತಾನದ ಏಜೆಂಟ್ ಆಗಿದ್ದಾರೆಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೊರೆಸ್ವಾಮಿ ನಕಲಿ ಸ್ವಾತಂತ್ರ್ಯ ಹೋರಾಟಗಾರರಾಗಿದ್ದು, ಸದಾ ಪಾಕಿಸ್ತಾನದ ಏಜೆಂಟ್ ರೀತಿಯಲ್ಲಿ ವರ್ತಿಸುತ್ತಾನೆ. ಈಗ ಆ ಮುದುಕ ಎಲ್ಲಿದ್ದಾನೆ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಪಾಕಿಸ್ತಾನ ಪರವಾಗಿ ಹೇಳಿಕೆ ನೀಡಿದರೆ ಮುಂದಿನ ದಿನಗಳಲ್ಲಿ ಜೈಲಿಗೆ ಕಳುಹಿಸುವುದಿಲ್ಲ. ಬದಲಾಗಿ ಗುಂಡೇಟು ನೀಡಿ ಕೊಲ್ಲಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ನಾಡಿನ ಸಾಕ್ಷಿಪ್ರಜ್ಞೆ, ಸಾಮಾಜಿಕ ಕಳಕಳಿಯುಳ್ಳ ಹಿರಿಯ ಸ್ವಾತಂತ್ರ ಹೋರಾಟಗಾರ ದೊರೆಸ್ವಾಮಿಯವರ ಬಗ್ಗೆ ಅತ್ಯಂತ ಕೀಳು ಮಟ್ಟದ ಹೇಳಿಕೆ ನೀಡಿರುವುದು ಖಂಡನೀಯ ಹಾಗೂ ಅಕ್ಷಮ್ಯ. ಹೀಗಾಗಿ, ಕೂಡಲೇ ಕೋಮುವಾದ ತಲೆಗೇರಿಸಿಕೊಂಡಿರುವ ಯತ್ನಾಳ್ ರಾಜೀನಾಮೆ ನೀಡಬೇಕು ಹಾಗೂ ದೊರೆಸ್ವಾಮಿಯ ಕ್ಷಮೆ ಕೇಳಬೇಕು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಆಗ್ರಹಿಸಿದೆ.