ಬಡಾವಣೆಯಲ್ಲಿ ಪೊಲೀಸ್ ಠಾಣೆಗೆ ವಿರೋಧ: ಕುಶಾಲನಗರ ಪ.ಪಂ ವಿರುದ್ಧ ಪ್ರತಿಭಟನೆ
ಮಡಿಕೇರಿ, ಮಾ.11: ಕುಶಾಲನಗರದ ಗುಂಡೂರಾವ್ ಬಡಾವಣೆಯಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಸಂಚಾರಿ ಪೊಲೀಸ್ ಠಾಣೆಗೆ ಬಡಾವಣೆ ನಿವಾಸಿಗಳು ವಿರೋಧ ವ್ಯಕ್ತಪಡಿಸಿ ಕುಶಾಲನಗರ ಪಟ್ಟಣ ಪಂಚಾಯತ್ ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಕುಶಾಲನಗರ ಗುಂಡುರಾವ್ ಬಡಾವಣೆ ವ್ಯಾಪ್ತಿಯ ಸಾರ್ವಜನಿಕ ಬಳಕೆಗೆ ಮೀಸಲಿರಿಸಿದ 27 ಸೆಂಟ್ ಪ್ರದೇಶದಲ್ಲಿ ಸಂಚಾರಿ ಪೊಲೀಸ್ ಠಾಣೆ ನಿರ್ಮಾಣಕ್ಕೆ ಜಿಲ್ಲಾಡಳಿತ ಅನುಮತಿ ಕಲ್ಪಿಸಿರುವುದನ್ನು ಖಂಡಿಸಿದ ಬಡಾವಣೆ ನಿವಾಸಿಗಳು ಈ ಮೂಲಕ ಅನಾನುಕೂಲ ಉಂಟಾಗಲಿದೆ ಎಂದು ದೂರಿದ್ದಾರೆ. ಸಂಚಾರಿ ಪೊಲೀಸ್ ಠಾಣೆ ನಿರ್ಮಾಣದಿಂದ ಬಡಾವಣೆ ಸೇರಿದಂತೆ ಸುತ್ತಮುತ್ತಲ ಬಡಾವಣೆಗಳ ಜನತೆಗೆ ಕಿರಿಕಿರಿ ಉಂಟಾಗಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಕೂಡಲೇ ಜಿಲ್ಲಾಧಿಕಾರಿಗಳು ನೀಡಿರುವ ಮಂಜೂರಾತಿ ಆದೇಶವನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿದರು. ಈ ಸಂಬಂಧ ತಾಲೂಕು ತಹಶೀಲ್ದಾರ್ ಗೋವಿಂದರಾಜು ಮತ್ತು ಕುಶಾಲನಗರ ಪಪಂ ಮುಖ್ಯಾಧಿಕಾರಿ ಸುಜಯ್ ಕುಮಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಜಿಪಂ ಸದಸ್ಯೆ ಕೆ.ಪಿ.ಚಂದ್ರಕಲಾ, ಗುಂಡೂರಾವ್ ಬಡಾವಣೆ ನಿವಾಸಿಗಳು ಹಾಗೂ ಪ್ರಮುಖರಾದ ವಿ.ಪಿ.ಶಶಿಧರ್, ಜಿ.ಎಲ್.ನಾಗರಾಜ್, ಕೆ.ಎನ್.ಅಶೋಕ್, ಮಂಜುನಾಥ್ ಗುಂಡುರಾವ್, ಲಕ್ಷ್ಮಣ, ಪಪಂ ಸದಸ್ಯರಾದ ಪ್ರಮೋದ್ ಮುತ್ತಪ್ಪ, ವಿ.ಎಸ್.ಆನಂದಕುಮಾರ್, ಶೇಖ್ ಖಲೀಮುಲ್ಲಾ, ಜಯಲಕ್ಷ್ಮಿ ನಂಜುಂಡಸ್ವಾಮಿ, ಪ್ರಮೋದ್ ಮುತ್ತಪ್ಪ, ಸುಂದರೇಶ್, ಜಗದೀಶ್, ಸುರೇಶ್, ಸುರಯ್ಯಭಾನು, ಮಾಜಿ ಸದಸ್ಯರಾದ ಜೋಸೆಫ್ ವಿಕ್ಟರ್ ಸೋನ್ಸ್, ನಂಜುಂಡಸ್ವಾಮಿ, ಅಬ್ದುಲ್ ಖಾದರ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.