ರೈತರಿಂದ ಹಾಲು ಖರೀದಿಗೆ ಯಾವುದೇ ಸಮಸ್ಯೆಯಿಲ್ಲ: ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ
ಬೆಂಗಳೂರು, ಎ.1: ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಲಾಕ್ಡೌನ್ ಇದ್ದರೂ ರೈತರಿಂದ ಹಾಲು ಖರೀದಿಸುವುದರಲ್ಲಿ ಯಾವುದೇ ಸಮಸ್ಯೆ ಆಗುವುದಿಲ್ಲವೆಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಲು ಉತ್ಪಾದಕರಿಂದ ನಿತ್ಯವು ಎರಡು ಹೊತ್ತು ಹಾಲನ್ನು ಖರೀದಿಸಲಾಗುತ್ತಿದೆ. ಇದನ್ನು ಹಾಗೆಯೇ ಮುಂದುವರೆಸಲಾಗುವುದು. ಹಾಗೂ ಫೆಬ್ರವರಿ ಹಾಗೂ ಮಾರ್ಚ್ನಲ್ಲಿ ಪಶು ಆಹಾರಕ್ಕೆ ನೀಡಿದ್ದ ರಿಯಾಯಿತಿಯನ್ನು ಎಪ್ರಿಲ್ ಅಂತ್ಯದವರೆಗೂ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದರು.
ರೈತರಿಂದ ಹಾಲು ಖರೀದಿ ಪ್ರಕ್ರಿಯೆಯಲ್ಲಿ ಯಾವುದೇ ಸಮಸ್ಯೆಯಾಗಬಾರದೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚಿಸಿದ್ದಾರೆ. ಈ ಸಂಬಂಧ ನಾನು ಕೆಎಂಎಫ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಪಶು ಆಹಾರ ಸಬ್ಸಿಡಿ ವಿಸ್ತರಣೆ ಸೇರಿದಂತೆ ಹಾಲು ಉತ್ಪಾದಕರಿಗೆ ಪೂರಕವಾಗುವಂತಹ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದೇನೆಂದು ಅವರು ಹೇಳಿದರು.
Next Story