ವಿವಾದಿತ ಹೇಳಿಕೆ: ಶಾಸಕ ರೇಣುಕಾಚಾರ್ಯ ವಿರುದ್ಧ ಎಫ್ಐಆರ್
ದಾವಣಗೆರೆ, ಎ.13: ವಿವಾದಾತ್ಮಕ ಹೇಳಿಕೆ ನೀಡಿದ್ದ ಹೊನ್ನಾಳಿ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ವಿರುದ್ಧ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
‘ಚಿಕಿತ್ಸೆಗೆ ಸಹಕರಿಸದ ತಬ್ಲೀಗಿಗಳನ್ನು ಗುಂಡಿಕ್ಕಿ ಕೊಂದರೂ ತಪ್ಪಲ್ಲ’ ಎಂದು ಇತ್ತೀಚಿಗೆ ರೇಣುಕಾಚಾರ್ಯ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. ಈ ಸಂಬಂಧ ಕಾಂಗ್ರೆಸ್ ಮುಖಂಡ ಎಂ.ಟಿ. ಸುಭಾಷ್ ಚಂದ್ರ ದೂರು ನೀಡಿದ್ದರು.
ದೂರಿನ ಅನ್ವಯ ಐಪಿಸಿ ಸೆಕ್ಷನ್ 153 (1), 117, 505 (1)(ಬಿ), 506 ಪ್ರಕಾರ ಎಫ್ಐಆರ್ ದಾಖಲಿಸಲಾಗಿದೆ. ಅವರು ಹೇಳಿಕೆ ನೀಡಿದ್ದ ಸ್ಥಳ ವ್ಯಾಪ್ತಿಗೆ ಬರುವ ಬಸವಾನಗರ ಪೊಲೀಸ್ ಠಾಣೆಗೆ ಪ್ರಕರಣ ವರ್ಗಾಯಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹಿಂದೆ ಚುನಾವಣೆಗೆ 15 ದಿನಗಳಿರುವಾಗ ಹೊನ್ನಾಳಿಯಲ್ಲಿ ಹಮ್ಮಿಕೊಂಡಿದ್ದ ವಿ.ಎಚ್.ಪಿ ಕಾರ್ಯಕ್ರಮದಲ್ಲಿ ಮಾತನಾಡಿದ್ದ ವಿಚಾರಕ್ಕೆ ನನ್ನನ್ನು ಬಳ್ಳಾರಿ ಜೈಲಿಗೆ ಕಳುಹಿಸಿದ್ದರು. ಕಾಂಗ್ರೆಸ್ ನಾಯಕರಿಗೆ ನನ್ನ ಮೇಲೆ ಬಹಳ ಪ್ರೀತಿ ಇದೆ. ಜೈಲಿಗೆ ಕಳುಹಿಸುವುದಾದರೆ ಕಳುಹಿಸಲಿ.
-ಎಂ.ಪಿ.ರೇಣುಕಾಚಾರ್ಯ, ಬಿಜೆಪಿ ಶಾಸಕ