ನಾಗರಹೊಳೆ ಉದ್ಯಾನವನದಲ್ಲಿ ಕರ್ತವ್ಯದಲ್ಲಿದ್ದ ವಾಚರ್ ಕೆರೆಯಲ್ಲಿ ಶವವಾಗಿ ಪತ್ತೆ
ಮೈಸೂರು,ಎ.18: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವಾಚರ್ ಶುಕ್ರವಾರ ಬೆಳಗಿನ ಜಾವ ಅರಣ್ಯದ ಕೆರೆಯೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಮೃತರನ್ನು ಉದ್ಯಾನವನದ ಹೆಚ್.ಡಿ.ಕೋಟೆ ತಾಲೂಕು ವ್ಯಾಪ್ತಿಯ ಕಳ್ಳಬೇಟೆ ತಡೆ ಶಿಬಿರದಲ್ಲಿ ಗುತ್ತಿಗೆ ಆಧಾರದಡಿ ವಾಚರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಮಹದೇವನಾಯ್ಕ(48) ಎಂದು ಗುರುತಿಸಲಾಗಿದೆ. ಮಹದೇವನಾಯ್ಕ ಗುರುವಾರ ರಾತ್ರಿ ಪಾಳಿಯಲ್ಲಿ ಆನೆಪಹರೆ ನಡೆಸಲು ಶಿಬಿರದಿಂದ ತೆರಳಿದ್ದರು. ಬೆಳಗಿನ ಜಾವ ಅವರು ಶಿಬಿರಕ್ಕೆ ಬರಬೇಕಿತ್ತು. ಆದರೆ ಬಂದಿರಲಿಲ್ಲ. ಅನುಮಾನಗೊಂಡು ಸಿಬ್ಬಂದಿ ಕಾಡಿನೊಳಗೆ ತೆರಳಿ ವೀಕ್ಷಿಸಿದಾಗ ಕೆರೆಯಲ್ಲಿ ಅವರ ಮೃತದೇಹ ತೇಲುತ್ತಿತ್ತು ಎನ್ನಲಾಗಿದೆ.
ಸ್ಥಳಕ್ಕೆ ಹುಲಿ ಯೋಜನೆ ನಿರ್ದೇಶಕ ಮಹೇಶ್ ಕುಮಾರ್, ಎಸಿಎಫ್ ಪ್ರಸನ್ನ ಕುಮಾರ್, ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಹೆಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story