ಪ್ರಚೋದನಕಾರಿ ಹೇಳಿಕೆ: ಅನಂತ್ ಕುಮಾರ್ ಸಂಸತ್ ಸದಸ್ಯತ್ವ ರದ್ದುಗೊಳಿಸಲು ಮಾರುತಿ ಮಾನ್ಪಡೆ ಆಗ್ರಹ
ಕಲಬುರಗಿ, ಎ.24: ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಮುಸ್ಲಿಮ್ ಸಮುದಾಯದ ವಿರುದ್ಧವಾಗಿ ಪ್ರಚೋದನಕಾರಿ ಹೇಳಿಕೆ ನೀಡುತ್ತಿರುವ ಸಂಸದ ಅನಂತ್ ಕುಮಾರ್ ಹೆಗಡೆ ಅವರ ಸಂಸತ್ ಸದಸ್ಯತ್ವನ್ನು ರದ್ದುಗೊಳಿಸಬೇಕು ಎಂದು ಸಿಪಿಎಂನ ರಾಜ್ಯ ಸಮಿತಿ ಸದಸ್ಯ ಮಾರುತಿ ಮಾನ್ಪಡೆ ಒತ್ತಾಯಿಸಿದ್ದಾರೆ.
ಕೊರೋನ ಸೋಂಕಿನ ಮುಸ್ಲಿಮ್ ಸಮುದಾಯದ ವ್ಯಕ್ತಿಗೆ ಸಂಸದ ಅನಂತ ಕುಮಾರ್ ಹೆಗಡೆ ಕೊರೋನ ಜಿಹಾದ್ ಎಂಬ ಪಟ್ಟಕಟ್ಟುವ ಮೂಲಕ ಸಮಾಜದಲ್ಲಿ ದ್ವೇಷದ ಭಾವನೆ, ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ವರ್ತಿಸುತ್ತಿದ್ದಾರೆ. ಇಂತವರು ಸಂಸತ್ನಲ್ಲಿ ಕೂರಲು ಯೋಗ್ಯರಲ್ಲ. ತಬ್ಲೀಗಿ ಸಭೆಯ ಮುಖ್ಯಸ್ಥರ ಖಾತೆಗೆ ಹಣ ಜಮೆ ಆಗಿರುವುದನ್ನೇ ಮುಂದಿಟ್ಟುಕೊಂಡು ಕೊರೋನ ಹರಡಲು ಕಳಿಸಿರುವ ಹಣ ಎನ್ನುವ ರೀತಿಯಲ್ಲಿ ಅನಂತ್ ಕುಮಾರ್ ಹೆಗಡೆ, ಸಮಾಜದಲ್ಲಿ ಶಾಂತಿಯನ್ನು ಕದಡುವಂತಹ ಕೆಲಸದಲ್ಲಿ ನಿರತರಾಗಿದ್ದಾರೆ. ಹಣ ಜಮೆ ಆಗಿರುವ ವಿಚಾರ ಇನ್ನು ತನಿಖೆ ಹಂತದಲ್ಲಿರುವಾಗಲೇ ಇವರು ಕೋಮುವಾದಿ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಇದು ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವಂತಹದ್ದಾಗಿದೆ.
ದೇಶಾದ್ಯಂತ ವಲಸೆ ಕಾರ್ಮಿಕರು, ಅಲೆಮಾರಿ ಜನಾಂಗದವರು ಮತ್ತು ಕೂಲಿ ಕಾರ್ಮಿಕರು ಹಸಿವಿನಿಂದ ಸಾಯುವಂತಹ ಪರಿಸ್ಥಿತಿ ನಿರ್ಮಾಣ ಮಾಡಲಾಗಿದೆ. ಈ ಬಗ್ಗೆ ಕಿಂಚಿತ್ತೂ ಕಾಳಜಿ ವ್ಯಕ್ತಪಡಿಸದ ಅನಂತ್ ಕುಮಾರ್ ಹೆಗಡೆ, ಸದಾ ದೇಶವನ್ನು ಒಡೆಯುವಂತಹ ಮಾತುಗಳನ್ನಷ್ಟೆ ಆಡುತ್ತಾರೆ. ಹೀಗಾಗಿ ಅವರು ಸಂಸದರಾಗಿ ಮುಂದುವರೆಯಲು ಅರ್ಹರಲ್ಲವೆಂದು ಅವರು ಪತ್ರಿಕಾ ಪ್ರಕಟನೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.