ಕವಿ ನಿಸಾರ್ ಅಹಮದ್ ನಿಧನ ಭರಿಸಲಾರದ ನಷ್ಟ: ಆರೆಸ್ಸೆಸ್
ಕವಿ ನಿಸಾರ್ ಅಹಮದ್
ಬೆಂಗಳೂರು, ಮೇ 3: ನಾಡಿನ ಹಿರಿಯ ಸಾಹಿತಿ ನಿಸಾರ್ ಅಹಮದ್ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರೆಸ್ಸೆಸ್), ನಿತ್ಯೋತ್ಸವ ಕವಿ ನಿಧನ ಭರಿಸಲಾರದ ನಷ್ಟ ಎಂದು ತಿಳಿಸಿದೆ.
ರವಿವಾರ ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಆರೆಸ್ಸೆಸ್ ಕ್ಷೇತ್ರಿಯ ಸಂಘಚಾಲಕ ವಿ.ನಾಗರಾಜ್, ಕನ್ನಡ ಸಾಹಿತ್ಯ, ಕಾವ್ಯ ಪರಂಪರೆಯನ್ನು ಶ್ರೀಮಂತಗೊಳಿಸಿದ ನಾಡಿನ ಹಿರಿಯ ಕವಿ ನಿಸಾರ್ ಅಹಮದ್ ಅವರ ನಿಧನವು ಭರಿಸಲಾರದ ನಷ್ಟ. ನಿಸಾರ್ ಅವರ ನಿರ್ಗಮನವು ಕನ್ನಡದ ಸಾರಸ್ವತ ಲೋಕಕ್ಕೆ ಶಾಶ್ವತ ಖಾಲಿತನವನ್ನು ನಿರ್ಮಿಸಿದೆ ಎಂದು ತಿಳಿಸಿದ್ದಾರೆ.
ಕುರಿಗಳು ಸಾರ್ ಕುರಿಗಳು, ಮತ್ತದೇ ಬೇಸರ ಅದೇ ಸಂಜೆಯಂತಹ ಮಧುರ ಮತ್ತು ಸಮೃದ್ಧ ಕವಿತೆಗಳ ರಚನಕಾರರಾದ ನಿಸಾರ್ ಅವರು ಕನ್ನಡದ ಜನರ ಬಾಯಲ್ಲಿ ನಾಡಗೀತೆಯಂತೆ ರಾರಾಜಿಸುತ್ತಿರುವ ಜೋಗದ ಸಿರಿ ಬೆಳಕಿನಲ್ಲಿ ಕವಿತೆಯ ಮೂಲಕ ಅಮರರಾಗಿದ್ದಾರೆ. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬದ ಸದಸ್ಯರು ಹಾಗೂ ಅಪಾರ ಅಭಿಮಾನಿಗಳಿಗೆ ಭಗವಂತ ನೀಡಲಿ ಎಂದು ಅವರು ಪ್ರಾರ್ಥಿಸಿದ್ದಾರೆ.