ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ತನಿಖೆಗೆ ಆದೇಶ: ಸಚಿವೆ ಶಶಿಕಲಾ ಜೊಲ್ಲೆ
ಬಿಜೆಪಿಯಿಂದ ಅಂಗನವಾಡಿ ಆಹಾರ ಪದಾರ್ಥ ದುರ್ಬಳಕೆ ಆರೋಪ
ಬೆಂಗಳೂರು, ಮೇ 4: ಅಂಗನವಾಡಿ ಮಕ್ಕಳ ಆಹಾರ ಪದಾರ್ಥಗಳಿಗೆ ಬಿಜೆಪಿ ಲೇಬಲ್ ಅಂಟಿಸಿ ಬಿಜೆಪಿ ದುರ್ಬಳಕೆ ಮಾಡಿಕೊಂಡಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಲಾಖೆ ವತಿಯಿಂದ ಹಿರಿಯ ನೋಡಲ್ ಅಧಿಕಾರಿಯನ್ನು ನೇಮಿಸಿ ತನಿಖೆಗೆ ಆದೇಶಿಸಲಾಗಿದೆ ಹಾಗೂ ಪೊಲೀಸರು ಎಫ್ಐಆರ್ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.
ಸೋಮವಾರ ಟ್ವೀಟ್ ಮಾಡಿರುವ ಸಚಿವರು, ಅಂಗನವಾಡಿ ಮಕ್ಕಳ ಆಹಾರ ಪದಾರ್ಥಗಳ ದುರ್ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯ ಬಳಿಕವೇ ಸ್ಪಷ್ಟ ಮಾಹಿತಿ ದೊರಕಲಿದ್ದು, ನ್ಯಾಯಾಂಗದ ಮೇಲೆ ನನಗೆ ಅಪಾರವಾದ ನಂಬಿಕೆ ಇದೆ ಎಂದು ಹೇಳಿದರು.
ಅಂಗನವಾಡಿ ಮಕ್ಕಳ ಆಹಾರ ಪದಾರ್ಥಗಳಿಗೆ ಬಿಜೆಪಿ ಲೇಬಲ್ ಅಂಟಿಸಿ ಬಿಜೆಪಿ ದುರ್ಬಳಕೆ ಮಾಡಿಕೊಂಡಿದ್ದು, ತಪ್ಪಿತಸ್ಥರ ವಿರುದ್ಧ ಸರಕಾರ ಕಾನೂನು ಕ್ರಮ ಕೈಗೊಳ್ಳಬೇಕೆಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಒತ್ತಾಯಿಸಿದ್ದರು.
ಇಡೀ ಪ್ರಪಂಚವೇ ಕೊರೋನದಿಂದ ಭಯಗೊಂಡಿದೆ. ಇವತ್ತಿನ ರಾಜಕಾರಣ ನೋಡಿದರೆ ನಾಚಿಕೆಯಾಗುತ್ತದೆ. ಮಕ್ಕಳಿಗಾಗಿ ನೀಡುವ ಆಹಾರವನ್ನು ದುರುಪಯೋಗ ಮಾಡಿಕೊಂಡಿರುವ ಬಿಜೆಪಿಯವರು ಮನುಷ್ಯರೇ ಅಲ್ಲ ಎಂದು ಕಿಡಿಕಾರಿದ್ದರು.