ಬಾವಿಗೆ ಬಿದ್ದ ಕುರಿ ರಕ್ಷಿಸಲು ತೆರಳಿದ ತಾಯಿ- ಮಗ ನೀರಿನಲ್ಲಿ ಮುಳುಗಿ ಸಾವು
ಬಳ್ಳಾರಿ, ಮೇ 7: ಬಾವಿಯಲ್ಲಿ ಬಿದ್ದ ಕುರಿ ಮರಿಯ ರಕ್ಷಣೆಗೆಂದು ತೆರಳಿದ್ದ ತಾಯಿ, ಮಗ ಸಾವನ್ನಪ್ಪಿರುವ ಘಟನೆ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಮಣ್ಣೂರು ಸೂಗೂರು ಗ್ರಾಮ ಹೊರವಲಯದಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕು ಮೂಲದ ಕುರಿಗಾಹಿ ಮಹಿಳೆ ನೀಲಮ್ಮ ಹಾಗೂ ಆಕೆಯ ಮಗ ಶಿವಾಜಿ ಸಾವನ್ನಪ್ಪಿದವರೆಂದು ಗುರುತಿಸಲಾಗಿದೆ.
ಕುರಿಮರಿಯೊಂದು ಬಾವಿಯೊಳಗೆ ಇಳಿದು ನೀರು ಕುಡಿಯಲು ಹೋಗಿತ್ತು. ಅಂದಾಜು 11 ರಿಂದ 12 ಅಡಿಯ ಆಳವಿದ್ದ ಬಾವಿಯಲ್ಲಿ ಆ ಕುರಿಮರಿಯು ನೀರು ಕುಡಿಯುತ್ತಲೇ ಕಾಲುಜಾರಿ ಬಿದ್ದಿದೆ. ಅದನ್ನು ಗಮನಿಸಿದ ನೀಲಮ್ಮ ಅವರು ಕುರಿ ಮರಿ ರಕ್ಷಣೆಗೆ ಬಾವಿಗಿಳಿದಿದ್ದರು. ಅವರೊಂದಿಗೆ ಬಾಲಕ ಶಿವಾಜಿ ಕೂಡ ಬಾವಿಯೊಳಗೆ ಇಳಿದಿದ್ದನು. ಈ ವೇಳೆ ಇಬ್ಬರೂ ಕಾಲುಜಾರಿ ಬಾವಿಗೆ ಬಿದ್ದ ಪರಿಣಾಮ ನೀರಿನೊಳಗೆ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಈ ಕುರಿತು ಸಿರಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story