ಕೊಳ್ಳೇಗಾಲ: ಸಚಿವ ಮಾಧುಸ್ವಾಮಿ ವಿರುದ್ಧ ರೈತರ ಪ್ರತಿಭಟನೆ; ಸಂಪುಟದಿಂದ ವಜಾಮಾಡಲು ಆಗ್ರಹ
ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ ಪೊಲೀಸರು
ಕೊಳ್ಳೇಗಾಲ, ಮೇ.21: ರೈತ ಮಹಿಳೆ ವಿರುದ್ಧ ಅವಾಚ್ಯ ಶಬ್ಧ ಬಳಸಿದ್ದಾರೆ ಎಂದು ಆರೋಪಿಸಿ ಸಚಿವ ಮಾಧುಸ್ವಾಮಿ ವಿರುದ್ಧ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಕೊಳ್ಳೇಗಾಲ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಸರ್ಕಲ್ನಲ್ಲಿ ಪ್ರತಿಭಟನೆ ನಡೆಸಿದರು.
ಪಟ್ಟಣದ ಆರ್.ಎಂ.ಸಿ ಮಾರುಕಟ್ಟೆಯಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು ಸಚಿವ ಮಾಧುಸ್ವಾಮಿ ವಿರುದ್ಧ ಧಿಕ್ಕಾರ ಕೂಗುತ್ತಾ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು. ಎಡಿಬಿ ವೃತ್ತದ ಬಳಿಗೆ ಆಗಮಿಸಿದ ಪ್ರತಿಭಟನಾಕಾರರು ಸಚಿವ ಮಾಧುಸ್ವಾಮಿರವರ ಪ್ರತಿಕೃತಿಯನ್ನು ದಹಿಸಲು ಮುಂದಾದಾಗ ಪೊಲೀಸರು ಪ್ರತಿಕೃತಿಯನ್ನು ವಶಪಡಿಸಿಕೊಂಡರು. ಈ ಸಂದರ್ಭ ಆಕ್ರೋಶಿತರಾದ ರೈತರು ಸಚಿವರ ವಿರುದ್ಧ ಘೋಷಣೆ ಕೂಗುತ್ತಾ ರಸ್ತೆಯಲ್ಲೇ ಕುಳಿತು ಪ್ರತಿಭಟನೆ ಮಾಡಲು ಮುಂದಾದರು. ಕೂಡಲೇ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಕರೆದೊಯ್ದರು.
ಠಾಣೆಯಲ್ಲಿ ರೈತ ರಾಮಕೃಷ್ಣ ಇದ್ದಕ್ಕಿದಂತೆ ಠಾಣೆಯಲ್ಲಿ ಕುಸಿದು ಬಿದ್ದಿದ್ದು, ತಕ್ಷಣ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು.
ಇದಕ್ಕೂ ಮುನ್ನ ರೈತ ಸಂಘದ ಅಧ್ಯಕ್ಷ ಗೌಡೇಗೌಡ ಮಾತನಾಡಿ, ಸರ್ಕಾರ ಸಚಿವ ಮಾಧುಸ್ವಾಮಿಯನ್ನು ಸಚಿವ ಸಂಪುಟದಿಂದ ಕೆಳಗಿಳಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುತ್ತೇವೆ. ಮಹಿಳೆಯ ಜೊತೆ ಅನುಚಿತವಾಗಿ ನಡೆದು ಕೊಳ್ಳುವುದು ಕಾನೂನು ಮಂತ್ರಿಯಾದ ಅವರಿಗೆ ಹೇಳಿಸಿದ್ದಲ್ಲ. ಸರ್ಕಾರ ಇಗಾಲೇ ಸಚಿವ ಮಾಧುಸ್ವಾಮಿ ಅಧಿಕಾರವನ್ನು ವಜಾಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘಧ ರಾಜ್ಯದ್ಯಕ್ಷ ಶಿವರಾಮು, ಅಣಗಳ್ಳಿ ಬಸವರಾಜು, ಕಾರ್ಯದರ್ಶಿ ರವಿನಾಯ್ಡು, ಉಪಾಧ್ಯಕ್ಷ ಜೊಯೆಲ್, ಬಸವಣ್ಣ, ರಾಜಣ್ಣ, ನಟೇಶ್, ದೊಡ್ಡಯ್ಯ, ಮಾಲಂಗಿ ಬಸವರಾಜು, ಕುಣಗಳ್ಳಿ ರಂಗಸ್ವಾಮಿ, ಶಿವಕುಮಾರ್ ಸೇರಿ ಹಲವು ಮಂದಿ ಇದ್ದರು.