ಅಂತರ್ ರಾಜ್ಯ ಪ್ರಯಾಣಿಕರ ಆರೋಗ್ಯ ತಪಾಸಣೆಗೆ ಮಾರ್ಗಸೂಚಿ ಹೊರಡಿಸಿದ ಆರೋಗ್ಯ ಇಲಾಖೆ
ಬೆಂಗಳೂರು, ಜೂ.7: ಸೋಮವಾರ(ಜೂ.8) ಮತ್ತಷ್ಟು ಲಾಕ್ಡೌನ್ ಸಡಿಲಿಕೆಯ ಹಿನ್ನೆಲೆಯಲ್ಲಿ ಅಂತರರಾಜ್ಯ ಪ್ರಯಾಣಿಕರ ಆರೋಗ್ಯ ತಪಾಸಣೆ, ಕ್ವಾರಂಟೈನ್ ಮತ್ತು ಪರೀಕ್ಷೆ ವೇಳೆ ಅನುಸರಿಸಬೇಕಾದ ನಿಯಮಗಳ ಬಗ್ಗೆ ಆರೋಗ್ಯ ಇಲಾಖೆಯು ವಿಸ್ತೃತ ಮಾರ್ಗಸೂಚಿಯನ್ನು ಪ್ರಕಟಿಸಿದೆ.
ಜೂ.8ರಂದು ದೊಡ್ಡ ಪ್ರಮಾಣದಲ್ಲಿ ಅಂತರರಾಜ್ಯ ಪ್ರಯಾಣಿಕರು ಬರುವ ನಿರೀಕ್ಷೆ ಇದೆ. ಅಂತರರಾಜ್ಯ ಪ್ರಯಾಣಿಕರಿಂದ ಕೊರೋನ ಸೋಂಕಿನ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೋಮವಾರದಿಂದ ರಾಜ್ಯಕ್ಕೆ ಆಗಮಿಸುವ ಅನ್ಯ ರಾಜ್ಯದವರಿಗಾಗಿ ಹೊಸ ಮಾರ್ಗಸೂಚಿ ಪ್ರಕಟಿಸಿದೆ.
ಗಡಿ ಸ್ವೀಕಾರ ಕೇಂದ್ರಗಳಲ್ಲಿ ಏನು ಮಾಡಬೇಕು?: ಅಂತರರಾಜ್ಯ ಪ್ರಯಾಣಿಕರು ಸರತಿ ಸಾಲಿನಲ್ಲಿ ಹೋಗುವಂತೆ ಬ್ಯಾರಿಕೇಡ್ಗಳನ್ನು ನಿರ್ಮಿಸಬೇಕು. ಆರೋಗ್ಯ ತಪಾಸಣಾ ಕೌಂಟರ್ ಸ್ಥಾಪಿಸಬೇಕು. ಕೊರೋನ ಸೋಂಕು ಲಕ್ಷಣ ಕಾಣಿಸದವರನ್ನು ಗಡಿ ಜಿಲ್ಲೆಯ ಆಸ್ಪತ್ರೆಗೆ ಕಳುಹಿಸುವುದು. ಸೋಂಕು ಪತ್ತೆಯಾದವರನ್ನು ಕೊರೋನ ಸೋಂಕು ಚಿಕಿತ್ಸಾ ಆಸ್ಪತ್ರೆಗೆ ಕಳುಹಿಸುವುದು. ವಲಸೆ ಕಾರ್ಮಿಕರು, ವಿಶೇಷ ಚೇತನರಿಗೆ ಪ್ರತ್ಯೇಕ ಕೌಂಟರ್ ತೆರೆಯಬೇಕು. ಉದ್ಯಮಿಗಳು ತಮ್ಮ ಪ್ರವಾಸದ ಬಗ್ಗೆ ಮಾಹಿತಿ ನೀಡಬೇಕು.
ಮಹಾರಾಷ್ಟ್ರದಿಂದ ಬರುವ ಪ್ರಯಾಣಿಕರನ್ನು ಹೋಂ ಕ್ವಾರಂಟೈನ್ಗೆ ಒಳಪಡಿಸುವುದು. ಸೋಂಕು ಲಕ್ಷಣ ಇಲ್ಲದ ಪ್ರಯಾಣಿಕರನ್ನು ಜಿಲ್ಲಾ ಸ್ವೀಕಾರ ಕೇಂದ್ರಕ್ಕೆ ಕಳುಹಿಸುವುದು.
ಮಹಾರಾಷ್ಟ್ರ ಮತ್ತು ಇತರ ರಾಜ್ಯದಿಂದ ಬಂದ ಪ್ರಯಾಣಿಕರು ನಿಗದಿತ ಜಿಲ್ಲಾ ಸ್ವೀಕಾರ ಕೇಂದ್ರದಲ್ಲಿ ಮಾಹಿತಿ ನೀಡಬೇಕು. ದಿನದ 24 ಗಂಟೆ ಕಾರ್ಯ. ಮಾಹಿತಿ ನೀಡದ ಪ್ರಯಾಣಿಕರ ವಿರುದ್ಧ ಶಿಸ್ತು ಕ್ರಮಕೈಗೊಳ್ಳಲಾಗುತ್ತದೆ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.