ಜೂನ್ 9ರಿಂದ ರಾಜ್ಯದಲ್ಲಿ ಮುಂಗಾರು ಮತ್ತಷ್ಟು ಚುರುಕು
ಬೆಂಗಳೂರು, ಜೂ.7: ನಿಸರ್ಗ ಚಂಡಮಾರುತ ಪ್ರಭಾವ ಕಡಿಮೆಯಾಗುತ್ತಿದ್ದಂತೆ ಮುಂಗಾರು ಆರಂಭವಾಗಿದ್ದು, ಜೂನ್ 9ರಿಂದ ಮತ್ತಷ್ಟು ಚುರುಕಾಗಲಿದೆ.
ಈ ಕುರಿತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮಾಹಿತಿ ನೀಡಿದ್ದು, ಈಗಾಗಲೇ ಬೆಂಗಳೂರು ಸೇರಿದಂತೆ ಇನ್ನಿತರ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ನಿಸರ್ಗ ಚಂಡಮಾರುತದ ನಂತರ ಮುಂಗಾರು ಕರಾವಳಿಯನ್ನು ಪ್ರವೇಶಿಸಿದೆ. ಆದರೆ, ಈಗ ಸಾಧಾರಣ ಮಳೆಯಾಗುತ್ತಿದ್ದು, ಜೂನ್ 9ರ ನಂತರ ಮುಂಗಾರು ಪ್ರಬಲವಾಗಲಿದೆ.
ಕೇರಳ ಮೂಲಕ ಜೂನ್ 4 ರಂದು ಕರಾವಳಿಯನ್ನು ಪ್ರವೇಶಿಸಿದ್ದ ಮುಂಗಾರು ಮಾರುತಗಳು ಈಗ ದಕ್ಷಿಣ ಒಳನಾಡನ್ನು ಆವರಿಸಿವೆ. ಹೀಗಾಗಿ ಕೆಲದಿನಗಳಿಂದ ಹಲವು ಭಾಗಗಳಲ್ಲಿ ಮಳೆಯಾಗುತ್ತಿದ್ದು ಮುಂದಿನ ದಿನಗಳಲ್ಲಿ ಇದು ಬಿರುಸುಗೊಳ್ಳಲಿದೆ ಎಂದು ಕೇಂದ್ರದ ನಿರ್ದೇಶಕ ಡಾ. ಶ್ರೀನಿವಾಸ ರೆಡ್ಡಿ ತಿಳಿಸಿದ್ದಾರೆ.
ಮುಂಗಾರು ಮಳೆಯ ನಿರೀಕ್ಷೆಯಲ್ಲಿ ರಾಜ್ಯದ ರೈತರು ಪೂರಕ ಕೃಷಿ ಚಟುವಟಿಕೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಈಗಿನ ವಾತಾವರಣವನ್ನು ಅವಲೋಕಿಸಿದರೆ ಮುಂಗಾರು ಪ್ರಬಲವಾಗಿ ಕರಾವಳಿ ಹಾಗೂ ಮಲೆನಾಡು, ಘಟ್ಟ ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸೂಚನೆಗಳಿವೆ. ಹಾಗೆಯೆ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲೂ ಮಳೆಯಾಗಲಿದೆ ಎಂದು ಅವರು ಹೇಳಿದ್ದಾರೆ.