ಚಾಮರಾಜನಗರ ಜಿಲ್ಲೆಯಲ್ಲಿ ಮೊದಲ ಕೋವಿಡ್ ಪ್ರಕರಣ ಪತ್ತೆ
ಮುಂಬೈ ನಿವಾಸಿ ಯುವಕನಲ್ಲಿ ಸೋಂಕು
ಚಾಮರಾಜನಗರ, ಜೂ.9: ಇದುವರೆಗೆ ಕೊರೋನ ಮುಕ್ತವಾಗಿದ್ದ ಚಾಮರಾಜನಗರ ಜಿಲ್ಲೆಗೂ ಕೋವಿಡ್-19 ಸೋಂಕು ವಕ್ಕರಿಸಿದೆ. ಆದರೆ ಸೋಂಕಿತ ವ್ಯಕ್ತಿ ಚಾಮರಾಜನಗರ ಜಿಲ್ಲೆಯವನಲ್ಲ. ಆತ ಮಹಾರಾಷ್ಟ್ರ ನಿವಾಸಿ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ತಿಳಿಸಿದ್ದಾರೆ.
ಜಿಲ್ಲಾಡಳಿತ ಸಭಾಂಗಣದಲ್ಲಿ ಇಂದು ಬೆಳಗ್ಗೆ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಪಾಲಿಮೇಡ್ ಗ್ರಾಮಕ್ಕೆ ಆಗಮಿಸಿದ ಮಹಾರಾಷ್ಟ್ರದ ಮುಂಬೈ ನಿವಾಸಿ ಯುವಕನಲ್ಲಿ ಕೊರೋನ ಸೋಂಕು ದೃಢಪಟ್ಟಿದೆ. ಈತ ನಿನ್ನೆ ತಡ ರಾತ್ರಿ ಹನೂರು ತಾಲೂಕಿನ ಸೂಳ್ವಾಡಿ ಗ್ರಾಮದಲ್ಲಿರುವ ತನ್ನ ಸೋದರ ಮಾವ ಮನೆಗೆ ಆಗಮಿಸಿದ್ದ ಎಂದು ಅವರು ತಿಳಿಸಿದ್ದಾರೆ.
ಆತನನ್ನು ಆತನನ್ನು ಕೊಳ್ಳೇಗಾಲದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೋಂಕಿತನ ಸಂಪರ್ಕಕ್ಕೆ ಬಂದಿರುವ ಆತನ ತಾಯಿ ಹಾಗೂ ಸಹೋದರನ ಗಂಟಲದ್ರವದ ಪರೀಕ್ಷಾ ವರದಿ ನೆಗಟಿವ್ ಬಂದಿದೆ. ಅವರನ್ನು ಹೋಂ ಕ್ವಾರಂಟೈನ್ಗೆ ಒಳಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.
ಕೊರೋನ ಸೋಂಕಿತ ವ್ಯಕ್ತಿ ನಮ್ಮ ಜಿಲ್ಲೆಯ ನಿವಾಸಿ ಅಲ್ಲದಿರುವ ಕಾರಣ ಚಾಮರಾಜನಗರ ಜಿಲ್ಲೆ ಹಸಿರು ವಲಯವಾಗಿಯೇ ಮುಂದುವರಿಯಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.