ಜುಲೈನಿಂದ ಅಕ್ಕಿಯೊಂದಿಗೆ ಜೋಳ, ರಾಗಿ ವಿತರಣೆ: ಸಚಿವ ಗೋಪಾಲಯ್ಯ
ಕಲಬುರಗಿ, ಜೂ.12: ಮುಂದಿನ ತಿಂಗಳಿನಿಂದ(ಜುಲೈ) ಪಡಿತರದಲ್ಲಿ ಅಕ್ಕಿ ಜತೆಗೆ ಆಯಾ ಪ್ರದೇಶಕ್ಕೆ ಅನುಗುಣವಾಗಿ ಜೋಳ ಮತ್ತು ರಾಣಿ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಆಹಾರ ಸಚಿವ ಕೆ.ಗೋಪಾಲಯ್ಯ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪಡಿತರ ಧಾನ್ಯ ವಿತರಣೆಯಲ್ಲಿ ಬದಲಾವಣೆ ತರಲಾಗಿದೆ. ಜುಲೈನಿಂದ ಉತ್ತರ ಕರ್ನಾಟಕ ಭಾಗದಲ್ಲಿ 3 ಕೆಜಿ ಅಕ್ಕಿಯೊಂದಿಗೆ 2 ಕೆಜಿ ಜೋಳ ಹಾಗೂ ಮೈಸೂರು ಭಾಗದಲ್ಲಿ 3 ಕೆಜಿ ಅಕ್ಕಿಯೊಂದಿಗೆ 2 ಕೆಜಿ ರಾಗಿಯನ್ನು ವಿತರಿಸಲಾಗುತ್ತದೆ ಎಂದರು.
ರಾಜ್ಯದಲ್ಲಿ 1.27 ಕೋಟಿ ಪಡಿತರ ಕಾರ್ಡ್ಗಳಿದ್ದು, 4.31 ಕೋಟಿ ಮಂದಿ ಪಡಿತರ ಫಲಾನುಭವಿಗಳಿದ್ದಾರೆ. ರಾಜ್ಯದ ಕಟ್ಟಕಡೆಯ ವ್ಯಕ್ತಿಗೂ ಆಹಾರ ದೊರಕಬೇಕು ಎಂಬುದು ಸರಕಾರದ ಆಶಯವಾಗಿದೆ. ಆದರೆ, ಬಡವರಿಗೆ ನೀಡುವ ಪಡಿತರವನ್ನು ದುರ್ಬಳಕೆ ಮಾಡಿಕೊಳ್ಳುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಪಡಿತರ ಚೀಟಿಗೆ ಹೊಸದಾಗಿ ಅರ್ಜಿ ಸಲ್ಲಿಸಿದ 1.18 ಲಕ್ಷ ಪಡಿತರ ಕುಟುಂಬಕ್ಕೂ 10 ಕೆಜಿ ಅಕ್ಕಿಯನ್ನು ನೀಡಬೇಕು. ಹಾಗೂ ಬೇರೆ ರಾಜ್ಯದ ನಿವಾಸಿಗಳಿಗೆ ಪಡಿತರ ಚೀಟಿ ಇಲ್ಲದಿದ್ದರೂ ಆಧಾರ್ ಕಾರ್ಡ್ ಆಧಾರದ ಮೇಲೆ ಪ್ರತಿ ವ್ಯಕ್ತಿಗೂ 10 ಕೆಜಿ ಅಕ್ಕಿ ಮತ್ತು 2 ಕೆಜಿ ಕಡಲೆಬೇಳೆ ನೀಡಬೇಕೆಂದು ನ್ಯಾಯಬೆಲೆ ಅಂಗಡಿಗಳಿಗೆ ಅವರು ಸೂಚಿಸಿದರು.