ಕೊಳ್ಳೇಗಾಲ: ತಾ.ಪಂ ನೂತನ ಅಧ್ಯಕ್ಷರಾಗಿ ಎಸ್.ಸುರೇಶ್ ಆಯ್ಕೆ
ಕೊಳ್ಳೇಗಾಲ, ಜು.8: ತಾಲೂಕು ಪಂಚಾಯತ್ ನೂತನ ಅಧ್ಯಕ್ಷರಾಗಿ ಧನಗೆರೆ ಕ್ಷೇತ್ರದ ಎಸ್.ಸುರೇಶ್ ಆಯ್ಕೆಯಾಗಿದ್ದಾರೆ.
ಕೊಳ್ಳೇಗಾಲ ತಾ.ಪಂ ನಿಂದ ಹನೂರು ವಿಭಜನೆಗೊಂಡು ಪ್ರತ್ಯೇಕ ತಾಲೂಕು ಕೇಂದ್ರವಾದ್ದರಿಂದ 29 ಸದಸ್ಯ ಸ್ಥಾನವಿದ್ದ ಕೊಳ್ಳೇಗಾಲ ತಾಲೂಕು 12 ಸ್ಥಾನಗಳಿಗಷ್ಟೆ ಸೀಮಿತ ವಾಯಿತು.ಈ ಹಿನ್ನಲೆ ಸಮಿತಿ ವಿಸರ್ಜನೆಯಾಗಿ ನೂತನ ಸಮಿತಿ ರಚನೆಗೆ ತಾ.ಪಂ. ಸಭಾಂಗಣದಲ್ಲಿ ಚುನಾವಣಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿ ನಿಖಿತ ಎಂ.ಚಿನ್ನಸ್ವಾಮಿ ರವರ ಸಮ್ಮುಖದಲ್ಲಿ ಬುಧವಾರ ಚುನಾವಣೆ ನಡೆಯಿತು.
ಚುನಾವಣೆಯಲ್ಲಿ ಧನಗೆರೆ ಕ್ಷೇತ್ರದ ಎಸ್.ಸುರೇಶ್, ಸಿದ್ದಯ್ಯನಪುರ ಕ್ಷೇತ್ರದ ಪುಷ್ಪಗುಣಶೇಖರ್ ಹಾಗೂ ರಾಜು ಸೇರಿದಂತೆ ಮೂವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು.
ಅಂತಿಮ ಕ್ಷಣದಲ್ಲಿ ರಾಜುರವರು ನಾಮಪತ್ರ ವಾಪಸ್ ಪಡೆದಿದ್ದರಿಂದ ಉಳಿದ ಇಬ್ಬರು ಅಭ್ಯರ್ಥಿಗಳಿಗೆ ಚುನಾವಣೆ ನಡೆಯಿತು. ಒಟ್ಟು 12 ಮತಗಳ ಪೈಕಿ, 5 ಮತ ಕಾಂಗ್ರೆಸ್ ಗೆ ದೊರಕಿದ್ದು, 1 ಮತ ತಟಸ್ಥಗೊಂಡಿದ್ದರಿಂದ ಇನ್ನುಳಿದ 6 ಮತಗಳನ್ನು ಬಿಜೆಪಿ ಬೆಂಬಲಿತ ಅಭ್ಯರ್ಥಿ ಧನಗೆರೆ ಕ್ಷೇತ್ರದ ಎಸ್.ಸುರೇಶ್ ಪಡೆದು ತಾಲೂಕು ಪಂಚಾಯತ್ ಅಧ್ಯಕ್ಷ ಸ್ಥಾನವನ್ನು ಮುಡಿಗೇರಿಸಿಕೊಂಡರು.
ಅಂತಿಮವಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಧನಗೆರೆ ಕ್ಷೇತ್ರದ ಎಸ್.ಸುರೇಶ್ ರವರನ್ನು ನೂತನ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿ ನಿಖಿತ ಎಂ.ಚಿನ್ನಸ್ವಾಮಿ ರವರು ಘೋಷಿಸಿದರು.