ಬೈಕ್ ಮುಟ್ಟಿದ ಕಾರಣಕ್ಕಾಗಿ ದಲಿತ ಯುವಕನಿಗೆ ಸವರ್ಣೀಯರ ಗುಂಪಿನಿಂದ ಹಲ್ಲೆ: ಆರೋಪ
ರಾಜ್ಯದಲ್ಲಿ ಮತ್ತೊಂದು ಅಮಾನವೀಯ ಘಟನೆ
ವಿಜಯಪುರ, ಜು.20: ಬೈಕ್ ಮುಟ್ಟಿದ ಕುಲ್ಲಕ ಕಾರಣಕ್ಕೆ ದಲಿತ ಯುವಕನ ಮೇಲೆ ಸವರ್ಣೀಯರು ಹಲ್ಲೆ ನಡೆಸಿ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಪರ ಹಾಗೂ ವಿರೋಧ ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣವನ್ನು ಸಮಗ್ರ ತನಿಖೆ ಗೊಳಪಡಿಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ಅಧಿಕಾ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.
ಘಟನೆಯ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ತಾಳಿಕೋಟೆ ತಾಲೂಕಿನ ಮಿಣಜಗಿ ಗ್ರಾಮದಲ್ಲಿ ದಲಿತ ಯುವಕ ಕಾಶಿನಾಥ್ ತಳವಾರ ಎಂಬಾತನನ್ನು ಸವರ್ಣೀಯರು ಮನ ಬಂದಂತೆ ಥಳಿಸಿದ್ದಾರೆ. ಚಪ್ಪಲಿಯಿಂದ ಹೊಡೆದು ಅವಮಾನಿಸಿದ್ದಾರೆ ಎಂದು ಹಲ್ಲೆಗೊಳಗಾದ ಯುವಕನ ತಂದೆ ಯಂಕಪ್ಪ ತಾಳಿಕೋಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅದರ ಪ್ರಕಾರ 13 ಮಂದಿಯ ವಿರುದ್ಧ ಜಾತಿ ನಿಂದನೆ ಹಾಗೂ ಹಲ್ಲೆ ಪ್ರಕರಣ ದಾಖಲಿಸಲಾಗಿದೆ. ಈಗಾಗಲೇ ನಾಲ್ವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಲಾಗಿದೆ ಎಂದು ಹೇಳಿದರು.
ಪ್ರತಿದೂರು: ಹಲ್ಲೆಗೊಳಗಾದ ಯುವಕ ಕಾಶಿನಾಥ ತಳವಾರ ಹೆಣ್ಣು ಮಕ್ಕಳು ಬಟ್ಟೆ ಒಗೆಯುವಾಗ ಅವರನ್ನು ಚುಡಾಯಿಸುತ್ತಿದನು ಎಂದು ಸವರ್ಣೀಯರು ಸಹ ಪ್ರತಿ ದೂರು ನೀಡಿದ್ದಾರೆ. ಈ ಸಂಬಂಧ ದಲಿತ ಯುವಕ ಕಾಶಿನಾಥ್ ವಿರುದ್ಧ ಯುವತಿಯೊಬ್ಬಳು ನೀಡಿದ ದೂರಿನಂತೆ ಪ್ರಕರಣ ದಾಖಲಿಸಲಾಗಿದೆ. ಈಗಾಗಲೇ ದೂರು-ಪ್ರತಿ ದೂರು ದಾಖಲಿಸಿ, ಸಮಗ್ರ ತನಿಖೆ ಗೊಳ ಪಡಿಸಲಾಗುವುದು ಎಂದು ಅಗರ್ವಾಲ್ ಮಾಹಿತಿ ನೀಡಿದರು.