ಶಿವಮೊಗ್ಗ ಮನಪಾ: ಕೆಲ ವಾರ್ಡುಗಳಲ್ಲಿ ಜು.23ರಿಂದ ಒಂದು ವಾರ ಬಿಗಿ ಲಾಕ್ ಡೌನ್
ಶಿವಮೊಗ್ಗ, ಜು.21: ಶಿವಮೊಗ್ಗದ ಕೆಲ ಭಾಗಗಳಲ್ಲಿ ಕೊರೋನ ಸೋಂಕು ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಬಿಗಿ ಲಾಕ್ ಡೌನ್ ಜಾರಿಗೊಳಿಸಿ ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ ವಠಾರೆ ಆದೇಶ ಹೊರಡಿಸಿದ್ದಾರೆ.
ಹೊಸ ಆದೇಶದ ಅನ್ವಯ ವಾರ್ಡ್ ನಂಬರ್ 22, 23, 29, 30 ಹಾಗೂ ವಾರ್ಡ್ ನಂಬರ್ 12, 13, 33ರಲ್ಲಿ ಜು.23ರಿಂದ 30ರವರೆಗೆ ಸಂಪೂರ್ಣ ಲಾಕ್ ಡೌನ್ ಜಾರಿಗೊಳಿಸಿ ಆದೇಶಿಸಿದ್ದಾರೆ.
ಹೊರಗಡೆ ವಾರ್ಡ್ ನಿಂದ ಬರುವವರು ಹಾಗೂ ಈ ವಾರ್ಡ್ ನಿಂದ ಹೊರಗಡೆ ಹೋಗುವವರಿಗೆ ನಿರ್ಬಂಧಿಸಲಾಗಿದ್ದು, ಈ ವ್ಯಾಪ್ತಿಯಲ್ಲಿ ಬರುವ ಎಲ್ಲ ಅಂಗಡಿ ಮುಂಗಟ್ಟುಗಳನ್ನ ಒಂದು ವಾರದ ವರೆಗೆ ಬಂದ್ ಮಾಡುವಂತೆ ಆದೇಶಿಸಲಾಗಿದೆ.
ಬೆಕ್ಕಿನ ಕಲ್ಮಠ, ಬಿ.ಎಚ್. ರಸ್ತೆ, ಅಮೀರ್ ಅಹ್ಮದ್ ವೃತ್ತ, ಅಶೋಕ ವೃತ್ತದಲ್ಲಿನ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ, ಒ.ಟಿ. ರಸ್ತೆ, ಬೈಪಾಸ್ ರಸ್ತೆ, ತುಂಗ ಹೊಸ ಸೇತುವೆಯ ವರೆಗೆ ಸಂಪೂರ್ಣ ಲಾಕ್ ಡೌನ್ ಆಗಲಿದೆ. ಆದರೆ ಕೆಲ ಅಗತ್ಯ ವಸ್ತುಗಳಿಗೆ ವಿನಾಯಿತಿಯನ್ನು ನೀಡಲಾಗಿದೆ. ಹಾಲಿನ ಅಂಗಡಿ, ಆಸ್ಪತ್ರೆಗಳು, ಮೆಡಿಕಲ್ ಶಾಪ್ ಗಳಿಗೆ ಸಂಪೂರ್ಣ ವಿನಾಯಿತಿ ನೀಡಲಾಗಿದೆ. ತರಕಾರಿ ಮಾರಾಟಕ್ಕೆ ಸಮಯ ನಿಗದಿಪಡಿಸಲಾಗಿದೆ. ತರಕಾರಿ, ದಿನಸಿ ಹಾಗು ಹಣ್ಣು ಮಾರಾಟಕ್ಕೆ ಬೆಳಗ್ಗೆ 5 ಗಂಟೆಯಿಂದ 10ರವರೆಗೆ ಮಾತ್ರ ಅವಕಾಶ ನೀಡಲಾಗಿದೆ.